ರಾಜ್ಯದಲ್ಲಿ ವಾಯುಪಡೆಯ ಸಿಬ್ಬಂದಿಯಿಂದ 500 ಜನರ ರಕ್ಷಣೆ: ಏರ್ ಮಾರ್ಷಲ್ ಗೋಟಿಯಾ

ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಲುಕಿದ್ದ ಸುಮಾರು 500 ಜನರನ್ನು ರಕ್ಷಿಸಲಾಗಿದ್ದು, 48 ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ...
ಎಸ್ ಕೆ ಗೋಟಿಯಾ
ಎಸ್ ಕೆ ಗೋಟಿಯಾ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಲುಕಿದ್ದ ಸುಮಾರು 500 ಜನರನ್ನು ರಕ್ಷಿಸಲಾಗಿದ್ದು, 48 ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ಏರ್ ಮಾರ್ಷಲ್ ಎಸ್.ಕೆ.ಗೋಟಿಯಾ ಅವರು ಮಂಗಳವಾರ ತಿಳಿಸಿದ್ದಾರೆ. 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ವಾಯುಪಡೆಯ ಪೈಲೆಟ್ ಗಳು ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ತರಬೇತಿ ಪಡೆದಿರುತ್ತಾರೆ. ಆದ್ದರಿಂದ ಎಲ್ಲಾ ಸವಾಲುಗಳನ್ನು ಎದುರಿಸಿಯೂ ರಕ್ಷಣಾ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.

ಹಂಪಿಯಲ್ಲಿ ಸಿಲುಕಿದ್ದ 25 ವಿದೇಶಿಗರು ಸೇರಿದಂತೆ 360 ಜನರನ್ನು ಸೋಮವಾರ ಹಾಗೂ 200 ಜನರನ್ನು ಮಂಗಳವಾರ ರಕ್ಷಿಸಲಾಗಿದೆ. ನೆರೆಯಲ್ಲಿ ಸಿಲುಕಿದ 16 ಜನರು ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಗ್ರಾಮಗಳು ಹಾಗೂ 40 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದರು.

ನಿನ್ನೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳಿದ್ದ ದೋಣಿ ನೀರಿನಲ್ಲಿ ಮುಳುಗಿತ್ತು. ವಾಯುಪಡೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ರಕ್ಷಿಸಿದ್ದಾರೆ. ರಾಜ್ಯದಲ್ಲಿ ಸದ್ಯ 5 ವಾಯುಪಡೆ ತಂಡಗಳಲ್ಲಿ 50ರಿಂದ 60 ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು. 

ಮೊದಲ ಹಂತದ ರಕ್ಷಣಾ ಕಾರ್ಯ ಹುಬ್ಬಳ್ಳಿಯಲ್ಲಿ ಕೈಗೊಳ್ಳಲಾಯಿತು. ನಂತರ  ಹೆಚ್ಚು ಹಾನಿಗೊಳಗಾಗಿದ್ದ ಬೆಳಗಾವಿಗೆ ತೆರಳಿದೆವು. ಅಲ್ಲಿನ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆವು ಎಂದರು.

ಕೆಲ ದಿನಗಳ ಕಾಲ ರಾಜ್ಯದಲ್ಲಿ ಸೇನೆ ರಕ್ಷಣಾ ಕಾರ್ಯ ಮುಂದುವರಿಸಲಿದೆ ಎಂದ ಅವರು, ತಮ್ಮ ತಂಡ ರಾತ್ರಿ ಕೂಡ ಕಾರ್ಯಾಚರಣೆ ನಡೆಸಲು ಸಿದ್ಧವಿದೆ. ಆದರೆ, ಇಲ್ಲಿಯವರೆಗೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com