ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ರೌಡಿ ಕಾಲಿಗೆ ಗುಂಡೇಟು

ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ರೌಡಿ ಶೀಟರ್ ನ ಕಾಲಿಗೆ ಗುಂಡು ಹಾರಿಸಿ ಬೆಂಗಳೂರು
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ರೌಡಿ ಶೀಟರ್ ನ ಕಾಲಿಗೆ ಗುಂಡು ಹಾರಿಸಿ ಬೆಂಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೌಡಿಶೀಟರ್ ಭರತ ಅಲಿಯಾಸ್ ಬಾಬಿ ಬಂಧಿತ ಆರೋಪಿ. ಈತ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಆರೋಪಿಯು ಇತ್ತೀಚೆಗಷ್ಟೇ ಜೈಲಿನಿಂದ ಹೊರಗೆ ಬಂದಿದ್ದ. ಆಗಸ್ಟ್ 10ರಂದು ಮಧ್ಯಾಹ್ನ 2-45 ರ ಸುಮಾರಿಗೆ ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಬ್ಲಾಕ್, 6ನೇ ಕ್ರಾಸ್, ಹೋಳಿ ಮನೆ ಹತ್ತಿರ ನಂದಿನಿಲೇಔಟ್ ಪೊಲೀಸ್ ಠಾಣೆಯ ರೌಡಿ ಶೀಟರ್ ವೆಂಕಟೇಶ್ ಅಲಿಯಾಸ್ ಕಾಡು ಮತ್ತು ಆತನ ತಂದೆ ನಡೆದುಕೊಂಡು ಹೋಗುವಾಗ ಭರತ ಅಲಿಯಾಸ್ ಬಾಬಿ ಮತ್ತು ಆತನ ನಾಲ್ವರು ಸಹಚರರು ಏಕಾಏಕಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಂದಿನಿಲೇಔಟ್ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

ನಂದಿನಿಲೇಔಟ್‍ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಲೋಹಿತ್ ಬಿ.ಎನ್. ಅವರು ಈ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿದಾಗ ಆಗಸ್ಟ್ 12ರಂದು ರಾತ್ರಿ 12.40 ಗಂಟೆಯಲ್ಲಿ ಮಂಜುನಾಥ ಎಂಬುವರು ಕೆಲಸ ಮುಗಿಸಿಕೊಂಡು ಬೈಕಿನಲ್ಲಿ ನಂದಿನಿಲೇಔಟ್, ಲಗ್ಗೆರೆ ಬಿಡ್ಜ್ ಹತ್ತಿರ ಹೋಗುವಾಗ ಅಪರಿಚಿತರು ಮಂಜನಾಥ್ ಅವರನ್ನು ದರೋಡೆ ಮಾಡಿ ಅವರ ಬಳಿದ್ದ ಹಣ, ಮೊಬೈಲ್ ಮತ್ತು ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಹೋಗಿದ್ದಾರೆಂದು ಮಾಹಿತಿ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ ಪೆಕ್ಟರ್ ಲೋಹಿತ್ ಮತ್ತು ಪಿಎಸ್ಐ ಲಕ್ಷ್ಮಣ್ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ದರೋಡೆ ಮಾಡಿದ ಬೈಕ್‍ನಲ್ಲಿಯೇ ಆರೋಪಿ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬೆನ್ನಟ್ಟಿದ್ದ  ಲಕ್ಷ್ಮಣ್ ಮತ್ತು ಸಿಬ್ಬಂದಿ, ಆರೋಪಿಯನ್ನು ಜಾಲಹಳ್ಳಿಯ ಪ್ರೆಸ್ಟೀಜ್ ಅಪಾರ್ ಮೆಂಟ್ ಹತ್ತಿರ ಹಿಡಿದುಕೊಳ್ಳಲು ಮುಂದಾಗಿದ್ದಾರೆ.

ದರೋಡೆಕೋರ, ಭರತ  ಅಲಿಯಾಸ್ ಬಾಬಿ (25)ಎಂಬುದು ಖಚಿತವಾಗುತ್ತಿದ್ದಂತೆ ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಭರತ, ಪೊಲೀಸ್ ಕಾನ್ಸ್ಟೇಬಲ್ ಉಮೇಶ್ ಅವರ ಮೇಲೆ ಏಕಾಏಕಿ ಡ್ರ್ಯಾಗರ್ ನಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಣ್ ಅವರು ಗಾಳಿಯಲ್ಲಿ 1 ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೆ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮುಂದುವರಿಸಿದಾಗ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಮ್ಮ ಮತ್ತು ಸಿಬ್ಬಂದಿಯವರ ಆತ್ಮರಕ್ಷಣೆಗಾಗಿ ಲಕ್ಷ್ಮಣ್ ಅವರು ಆರೋಪಿ ಭರತ್‍ನ ಬಲಗಾಲಿಗೆ 1 ಸುತ್ತು ಗುಂಡು ಹಾರಿಸಿದ್ದಾರೆ. ತಕ್ಷಣ ಕುಸಿದು ಬಿದ್ದ ಭರತನನ್ನು ಮತ್ತು ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಅವರನ್ನು ಚಿಕಿತ್ಸೆಗಾಗಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭರತ ಈ ಹಿಂದೆ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯ 2-ಕೊಲೆ ಪ್ರಯತ್ನ, ನಂದಿನಿಲೇಔಟ್ ಪೊಲೀಸ್ ಠಾಣೆಯ 2-ಕೊಲೆ ಪ್ರಯತ್ನ, ದರೋಡೆ-1, ಬ್ಯಾಟರಾಯನಪುರ ಮತ್ತು ನೆಲಮಂಗಲ ಪೊಲೀಸ್ ಠಾಣೆಯ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com