ಮಳೆಗೆ ರಜೆ ನೀಡಿದ್ದಕ್ಕೆ ಬದಲಿಯಾಗಿ ಇನ್ನು ಕೆಲ ಸಮಯ ಭಾನುವಾರ ಶಾಲೆ: ಶಿಕ್ಷಣ ಇಲಾಖೆ 

ರಾಜ್ಯದ ಕೆಲವು ಪ್ರವಾಪೀಡಿತ ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಮಳೆಯ ಕಾರಣದಿಂದಾಗಿ ಈಗಾಗಲೇ ಶಾಲಾ ಮಕ್ಕಳಿಗೆ ಸಾಕಷ್ಟು ರಜೆ ನೀಡಲಾಗಿದೆ. 
ಕೊಡಗು ಜಿಲ್ಲೆಯಲ್ಲಿ ಜಲಪ್ರಳಯದಿಂದ ಜನರ ರಕ್ಷಣೆ ಮಾಡುತ್ತಿರುವುದು
ಕೊಡಗು ಜಿಲ್ಲೆಯಲ್ಲಿ ಜಲಪ್ರಳಯದಿಂದ ಜನರ ರಕ್ಷಣೆ ಮಾಡುತ್ತಿರುವುದು

ಬೆಂಗಳೂರು: ರಾಜ್ಯದ ಕೆಲವು ಪ್ರವಾಪೀಡಿತ ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಮಳೆಯ ಕಾರಣದಿಂದಾಗಿ ಈಗಾಗಲೇ ಶಾಲಾ ಮಕ್ಕಳಿಗೆ ಸಾಕಷ್ಟು ರಜೆ ನೀಡಲಾಗಿದೆ. ಮಳೆಯ ಸಂದರ್ಭದಲ್ಲಿ ಶಾಲಾ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕ್ರಮ ಕೈಗೊಂಡಿದೆ. 


ಪ್ರವಾಹದಲ್ಲಿ ಹಲವು ಜನರು ಮನೆ-ಮಠ ಕಳೆದುಕೊಂಡಿರುವುದರಿಂದ ಅನೇಕ ಕಡೆ ಶಾಲೆಗಳನ್ನು ನಿರಾಶ್ರಿತ ಕೇಂದ್ರಗಳನ್ನಾಗಿ ಮಾಡಲಾಗಿದೆ. ಇನ್ನೊಂದೆಡೆ ಕೆಲವು ಶಾಲೆಗಳು ಕೂಡ ಭಾರೀ ಮಳೆಗೆ ಕುಸಿದು ಹೋಗಿ ನಾಶವಾಗಿದೆ. ಇಲ್ಲಿನ ಮಕ್ಕಳ ಶಿಕ್ಷಣ ವ್ಯವಸ್ಥೆಗೆ  ಸರ್ಕಾರ ಬದಲಿ ತುರ್ತು ವ್ಯವಸ್ಥೆ ಮಾಡಬೇಕಿದೆ. 

ಪ್ರವಾಹವುಂಟಾಗಿ ಸಾವು, ನೋವು, ನಷ್ಟ ಉಂಟಾದ ಕಡೆಗಳಲ್ಲಿನ ಮಕ್ಕಳು ಸೇರಿದಂತೆ ಜನರ ಆರೋಗ್ಯ ಸ್ಥಿತಿಗತಿ ಕಾಪಾಡುವುದು ಸದ್ಯಕ್ಕೆ ಸವಾಲಿನ ಪ್ರಶ್ನೆಯಾಗಿದೆ. ಹಲವು ದಿನಗಳು ಶಾಲೆಗಳಿಗೆ ರಜೆ ನೀಡಿರುವುದರಿಂದ ಆ ದಿನಗಳ ಪಾಠಗಳನ್ನು ಮುಂದಿನ ರಜಾ ದಿನಗಳಲ್ಲಿ ಮತ್ತು ಶನಿವಾರ ಪೂರ್ತಿ ದಿನ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಏಪ್ರಿಲ್ ನಲ್ಲಿ ನಿಗದಿಪಡಿಸಿದಂತೆ ತರಗತಿಗಳು ಮುಂದುವರಿಯಲಿವೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ ಜಿ ಜಗದೀಶ್, ಪ್ರವಾಹ, ವಿಪತ್ತಿನ ಸಂದರ್ಭದಲ್ಲಿ ಶಾಲೆ ನಡೆಸುವ ಬಗ್ಗೆ ತೀರ್ಮಾನ ಪ್ರಮುಖ ವಿಷಯವಾಗುವುದಿಲ್ಲ. ಪ್ರವಾಹ ಹಿನ್ನಲೆಯಲ್ಲಿ ಮಾಡಲಾಗದ ತರಗತಿಗಳಿಗೆ ಪರಿಹಾರವಾಗಿ ಮುಂದಿನ ದಿನಗಳಲ್ಲಿ ಯಾವಾಗ ತರಗತಿ ನಡೆಸಬಹುದು ಎಂದು ತೀರ್ಮಾನ ಮಾಡಲು ವಲಯ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯೋಪಾಧ್ಯಾಯರುಗಳ ವಿವೇಚನೆಗೆ ಬಿಡಲಾಗಿದೆ. ಜಿಲ್ಲಾಡಳಿತದೊಂದಿಗೆ ಸಹಕರಿಸಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.

ತರಗತಿಗಳ ಸುರಕ್ಷತೆಗೆ ಆದ್ಯತೆ: ಪ್ರವಾಹ ಬಂದ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಲಾ ಕಟ್ಟಡಗಳು ಸುರಕ್ಷಿತವಾಗಿವೆಯೇ, ಅಲ್ಲಿ ತರಗತಿಗಳನ್ನು ನಡೆಸಬಹುದೇ ಎಂಬ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸುತ್ತಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಗಳನ್ನು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಗಳಿಗೆ ಕೂಡ ತಪಾಸಣೆ ನಡೆಸುವಂತೆ ಹೇಳಲಾಗಿದೆ.

ಮಳೆ ನೀರಿನಲ್ಲಿ ಮಕ್ಕಳು ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನ ಸಾಮಗ್ರಿಗಳನ್ನು ಕಳೆದುಕೊಂಡಿದ್ದರೆ ಇದೇ 16ರೊಳಗೆ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆಡಳಿತ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com