ಬೆಂಗಳೂರು: ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿರುವಂತೆ ಸಚಿವ ಸ್ಥಾನ ವಂಚಿತ ಬೆಳಗಾವಿಯ ಸಾಹುಕಾರ್ ಬಾಲಚಂದ್ರ ಜಾರಕಿಹೊಳಿ ಅವರನ್ನು ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳ- ಕೆಎಂಎಫ್ ಅಧ್ಯಕ್ಷ ಗಾದಿಗೆ ತಂದು ಕೂರಿಸಲು ನಿರ್ಧರಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಆಗಸ್ಟ್ 31 ರಂದು ನಡೆಯಲಿರುವ ಕೆಎಂಎಫ್ ಅಧ್ಯಕ್ಷ ಹುದ್ದೆಗಾಗಿ ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಶಾಸಕ ಭೀಮಾನಾಯ್ಕ್ ಕಣ್ಣಿಟ್ಟಿದ್ದಾರೆ. ಈಗ ಅವರೊಂದಿಗೆ ಬಾಲಚಂದ್ರ ಜಾರಕಿಹೊಳಿ ಪೈಪೋಟಿ ನಡೆಸುವ ಸುಳಿವು ನೀಡಿದ್ದಾರೆ.
ನೇರವಾಗಿ ಜನರ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದು, ಕೆಎಂಎಫ್ ನ ಎಲ್ಲ 15 ನಿರ್ದೇಶಕರ ವಿಶ್ವಾಸ ಗಳಿಸಿ ಅಧ್ಯಕ್ಷನಾಗಲು ಬಯಸಿರುವುದಾಗಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಸರ್ಕಾರದಿಂದ ಈಗಾಗಲೇ ನಾಮನಿರ್ದೇಶನ ಮಾಡಿದ್ದಾರೆ.
ಇದೇ ಹುದ್ದೆಗಾಗಿ ರೇವಣ್ಣ ಹಾಗೂ ಭೀಮಾನಾಯ್ಕ್ ಲಾಬಿ ಆರಂಭಿಸಿದ್ದಾರೆ. ಆದರೆ, ಯಾರು ಅಧ್ಯಕ್ಷರಾಗುತ್ತಾರೆ ಎಂಬ ಕುತೂಹಲಕ್ಕೆ ಆಗಸ್ಟ್ 31 ರಂದು ತೆರೆ ಬೀಳಲಿದೆ.
Advertisement