ವಿಜಯಪುರ: ತೆಲಂಗಾಣ ಮೂಲದ ಆರು ಮಹಿಳೆಯರು ಸೇರಿದಂತೆ ಒಟ್ಟು 20 ಮಂದಿ ಜೀತದಾಳುಗಳನ್ನು ವಿಜಯಪುರ ಜಿಲ್ಲಾಡಳಿತ ರಕ್ಷಣೆ ಮಾಡಿದೆ.
ಏತ ನೀರಾವರಿ ಯೋಜನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ತೆಲಂಗಾಣ ಮೂಲದ 20 ಜೀತದಾಳುಗಳನ್ನು ರಕ್ಷಿಸಿರುವ ಜಿಲ್ಲಾಡಳಿತ ಬಾಧಿ ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದೆ.
ವಿಜಯಪುರದ ಚಡಚಣ ತಾಲೂಕಿನ ಚಡಚಣ ಗ್ರಾಮದ ಏತ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಬೆಳಗಾವಿಯ ಆದಿತ್ಯ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 20 ಜನ ಜೀತದಾಳುಗಳನ್ನು ಜೀತಮುಕ್ತ ಮಾಡಲಾಗಿದೆ.
ನ್ಯಾಷನಲ್ ಆದಿವಾಸಿ ಸೋಲಿಡರ್ಟಿ ಕೌನ್ಸಿಲ್ ನ ಕೋಆರ್ಡಿನೇಟರ್ ವಾಸುದೇವರಾವ್ ಅವರು ಚಡಚಣ ಗ್ರಾಮದಲ್ಲಿ ಜೀತದಾಳು ಇರುವ ಕುರಿತು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಇಂಡಿ ಉಪವಿಭಾಗಾಧಿ ಕಾರಿ ಸ್ನೇಹಲ್ ಲೋಖಂಡೆ ಅವರಿಗೆ ತುರ್ತಾಗಿ ಜೀತದಾಳುಗಳನ್ನು ರಕ್ಷಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಜೀತಮುಕ್ತರಾದ ಕಾರ್ಮಿಕರಲ್ಲಿ ಎಲ್ಲರೂ ತೆಲಂಗಾಣ ಮೂಲದವರಾಗಿದ್ದು, 13 ಗಂಡಸರು, 6 ಹೆಂಗಸರು ಹಾಗೂ ಓರ್ವ ಬಾಲಕ ಸೇರಿದಂತೆ ಒಟ್ಟು 20 ಜೀತದಾಳುಗಳನ್ನು ರಕ್ಷಿಸಿ, ಚಡಚಣ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದ್ದಾರೆ.
ಅಲ್ಲದೇ ಜೀತಮುಕ್ತ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವಂತೆ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಕಳೆದ 2 ತಿಂಗಳುಗಳಿಂದ ಬೆಳಗಾವಿಯ ಆದಿತ್ಯ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ 10 ಸಾವಿರ ಹಾಗೂ 50 ಸಾವಿರ ರೂ.ದಂತೆ ಮುಂಗಡ ಹಣ ನೀಡಿ ಜೀತದಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಪ್ರತಿ ತಿಂಗಳು 2 ಸಾವಿರ ರೂ. ಮುಂಗಡ ಹಣದಲ್ಲಿ ಕಡತ ಮಾಡುತ್ತಿದ್ದರು. ಕಾರ್ಮಿಕರಿಗೆ ಗುತ್ತಿಗೆದಾರರು ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ, ತಮಗೆ ಗುಡಿಸಲುಗಳಲ್ಲಿ ವಾಸಕ್ಕೆ ಇರಿಸಿದ್ದು, ಹೊರಗೆ ಎಲ್ಲೂ ಹೋಗದಂತೆ ನಿರ್ಬಂಧಿಸಿದ್ದರು ಎಂದು ದೂರಿದ್ದಾರೆ.
Advertisement