ಆಲಮಟ್ಟಿ ಯೋಜನೆ ಪೂರ್ಣಾನುಷ್ಠಾನ ಹೊಣೆ ಹೊರುತ್ತಾ ಕೇಂದ್ರ ಸರ್ಕಾರ ?

ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಕೃಷ್ಣಾ ಮೇಲ್ದಂಡೆ ಯೋಜನೆ ಸದ್ಯಕ್ಕೆ ಪೂರ್ಣಗೊಳ್ಳುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಏಳು ವರ್ಷಗಳ ಹಿಂದೆ ೧೭೨೦೦ ಕೋಟಿ ರೂ.ಗಳಷ್ಟಿದ್ದ ಯೋಜನಾ ವೆಚ್ಚ ಇದೀಗ ೧ ಲಕ್ಷ ಕೋಟಿಗೆ ತಲುಪಿದೆ.
ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ

ಬಾಗಲಕೋಟೆ: ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಕೃಷ್ಣಾ ಮೇಲ್ದಂಡೆ ಯೋಜನೆ ಸದ್ಯಕ್ಕೆ ಪೂರ್ಣಗೊಳ್ಳುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಏಳು ವರ್ಷಗಳ ಹಿಂದೆ ೧೭೨೦೦ ಕೋಟಿ ರೂ.ಗಳಷ್ಟಿದ್ದ ಯೋಜನಾ ವೆಚ್ಚ ಇದೀಗ ೧ ಲಕ್ಷ ಕೋಟಿಗೆ ತಲುಪಿದೆ.

ಇಷ್ಟೊಂದು ಹಣ ಹೊಂದಿಸಿ, ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಯೋಜನೆ ಪೂರ್ಣಗೊಳಿಸುವುದು ಸಾಧ್ಯವಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನಡುಗಡ್ಡೆ ಆಗಲಿರುವ ಬಾಗಲಕೋಟೆಯ ಕಿಲ್ಲಾ ಪ್ರದೇಶದಲ್ಲಿನ ೮೮೮ ಮನೆಗಳ ಸ್ಥಳಾಂತರ ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟ ಪಡಿಸಿರುವುದನ್ನು ಗಮನಿಸಿದಾಗ ಯೋಜನೆಗೆ ಹಣ ಹೊಂದಿಸುವುದು ರಾಜ್ಯ ಸರ್ಕಾರಕ್ಕೆ ಕಷ್ಟ ಎನ್ನುವುದು ಸ್ಪಷ್ಟವಾಗುತ್ತಿದೆ. 

ಇದಕ್ಕೆ ಪೂರಕ ಎನ್ನುವಂತೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಳೆದ ವರ್ಷವೇ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟೀಯ ಯೋಜನೆಯಾಗಿ ರೂಪಿಸಿಬೇಕು ಎನ್ನುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಆ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎನ್ನುವುದು ಗಮನಾರ್ಹ.

ದಿವಂಗತ ಪ್ರಧಾನಿ ಲಾಲಬಹದ್ದೂರ ಶಾಸ್ತ್ರಿ ಅವರಿಂದ ಶಂಕುಸ್ಥಾಪನೆಗೊಂಡಿರುವ ಆಲಮಟ್ಟಿ ಜಲಾಶಯ ಕಾಮಗಾರಿ ಇನ್ನೂ ಪೂರ್ಣಗೊಳ್ಳುತ್ತಿಲ್ಲ. ಇದುವರೆಗೂ ನಮ್ಮನ್ನಾಳಿದ ಸರ್ಕಾರಗಳ ನಿಷ್ಕಾಳಜಿ ಪರಿಣಾಮವಾಗಿ ಇಂದು ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣ ಅನುಷ್ಠಾನ ಸಾಧ್ಯವಾಗುತ್ತಿಲ್ಲ.

ಆಲಮಟ್ಟಿ ಜಲಾಶಯದ ಹಿನ್ನೀರು ಬಾಧಿತ ಸಂತ್ರಸ್ತರ ಬದುಕು ಹಸನಾಗಿ, ಅವರು ನೆಮ್ಮದಿಯ ಜೀವನ ಕಳೆಯುವಂತಾಗಲು, ಕೃಷ್ಣಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ಬರಡು ಭೂಮಿ ಸದಾ ಹಸುರಿನಿಂದ ನಳನಳಿಸುವಂತಾಗಲು ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕಿದೆ. ಅಂದಾಗ ಮಾತ್ರ ಜಲಾಶಯ ನಿರ್ಮಾಣ ಉದ್ದೇಶ ಸಾರ್ಥಕವಾಗಲಿದೆ ಎಂದು ನೀರಾವರಿ ಹೋರಾಟಗಾರರು ಅಭಿಪ್ರಾಯ ಪಡುತ್ತಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾಮಗಾರಿಗಳೇ ಇನ್ನೂ ಪೂರ್ಣಗೊಂಡಿಲ್ಲ. ಅವುಗಳನ್ನು ಪೂರ್ಣಗೊಳಿಸುವ ಜತೆಗೆ ಮೂರನೇ ಹಂತದ ಕಾಮಗಾರಿಗಳನ್ನು ಚುರುಕುಗೊಳಿಸಬೇಕಿದೆ. 
ಇವೆಲ್ಲವುಗಳ ಜತೆಗೆ ಆಲಮಟ್ಟಿ ಜಲಾಶಯದ ಎತ್ತರವನ್ನು ೫೧೯.೬೦ ರಿಂದ ೫೨೪.೪೨೫ ಮೀಟರ್‌ಗೆ ಹೆಚ್ಚಿಸಲು ಕೃಷ್ಣಾ ನ್ಯಾಯಾಧೀಕರಣ-೨ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದೆ. ನ್ಯಾಯಾಧೀಕರಣ ತೀರ್ಪು ೨೦೧೦ ರಲ್ಲೇ ಹೊರಬಿದ್ದಿದ್ದರೂ ಇದುವರೆಗೂ ಕೇಂದ್ರ ಅಧಿಸೂಚನೆ ಹೊರಡಿಸುತ್ತಿಲ್ಲ. ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಯಾರೂ ಒತ್ತಡ ಹಾಕುವ ಗೋಜಿಗೆ ಹೋಗುತ್ತಿಲ್ಲ.

ಯುಕೆಪಿ ಯೋಜನೆ ಪೂರ್ಣಾನುಷ್ಠಾನಕ್ಕಾಗಿ ರಾಜ್ಯದಲ್ಲಿ ಪಕ್ಷಾತೀತವಾಗಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ರೂಪಿಸಲು ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಆಗಬೇಕಿದೆ. ಆದರೆ ಈ ನಿಟ್ಟಿನಲ್ಲಿ ರಾಜ್ಯದ ಮುಖಂಡರಿಂದ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಗಂಭೀರ ಪ್ರಯತ್ನ ನಡೆಯದ ಹೊರತು ಯೋಜನೆಯ ಪೂರ್ಣ ಕಾರ್ಯಾನುಷ್ಠಾನ ಅಸಾಧ್ಯ ಎನ್ನಬಹುದು.

ಕೇಂದ್ರದ ಆಡಳಿತಾರೂಢ ಸರ್ಕಾರದ ಪಕ್ಷದಲ್ಲಿ ರಾಜ್ಯದ ೨೫ ಜನ ಸಂಸದರು ಇದ್ದಾರೆ. ಇವರ ಮೇಲೆ ರಾಜ್ಯದ ನಾಯಕರು ಒತ್ತಡ ಹಾಕಿ ಪ್ರಧಾನಿಗಳ ಮೇಲೆ ಪ್ರಭಾವ ಬೀರುವ ಮೂಲಕ ರಾಜ್ಯ ಸರ್ಕಾರದಿಂದ ಸಾಧ್ಯವಾದ ಕಾರ್ಯವನ್ನು ಕೇಂದ್ರದಿಂದ ಮಾಡಿಸುವ ಕೆಲಸ ಆಗಬೇಕಿದೆ. ಈ ವಿಷಯದಲ್ಲಿ ರಾಜ್ಯದ ಜನಪ್ರತಿನಿಧಿಗಳು ಎಷ್ಟರ ಮಟ್ಟಿಗೆ ರಾಜಕೀಯ ಇಚ್ಛಾಶಕ್ತಿ ಮೆರೆಯಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

ರಾಜ್ಯದ ಜನಪ್ರತಿನಿಧಿಗಳು ತಾವಾಗಿಯೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ನೀರಾವರಿ ಹೋರಾಟಗಾರರು ರೈತರನ್ನು ಜಾಗೃತಗೊಳಿಸಿ ಜನಾಂದೋಲ ರೂಪಿಸುವುದು ಅನಿವಾರ್ಯ ಎನ್ನುವ ವಾತಾವರಣ ಸೃಷ್ಟಿಯಾದಲ್ಲಿ ಅಚ್ಚರಿ ಪಡಬೇಕಿಲ್ಲ.


ವರದಿ- ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com