ಬೆಂಗಳೂರು: ಹೈದರಾಬಾದ್ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇದೀಗ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಈ ನಡುವೆ ಬೆಂಗಳೂರು ನಗರ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.
ಬೆಂಗಳೂರು ನಗರ ಬದಲಾಗುತ್ತಿದೆ. ದೆಹಲಿ ಭಾರತದ ಅತ್ಯಾಚಾರದ ರಾಜಧಾನಿ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ. ಪ್ರತೀನಿತ್ಯ ಒಂದಲ್ಲ ಒಂದು ಅತ್ಯಾಚಾರ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ನಮ್ಮಲ್ಲಿ ಕಠಿಣ ಕಾನೂನು ಇಲ್ಲದ ಕಾರಣ ಪುರುಷರಿಗೆ ಭಯವಿಲ್ಲದಂತಾಗಿದೆ. ಸಂಜೆ ವೇಳೆ ವಾಕಿಂಗ್ ಹೋಗುವಾಗ ಯುವಕರು ಗ್ಯಾಂಗ್ ಕಟ್ಟಿ ನಿಲ್ಲುವುದನ್ನು ನೋಡುತ್ತೇನೆ. ಮಹಿಳೆಯರು ರಸ್ತೆಯಲ್ಲಿ ಹೋಗುತ್ತಿರುವುದನ್ನು ನೋಡುತ್ತಿದ್ದಂತೆಯೇ ಕೆಟ್ಟದಾಗಿ ಮಾತನಾಡಲು ಹಾಗೂ ಕೂಗಲು ಆರಂಭಿಸುತ್ತಾರೆ. ವಯಸ್ಸಿಗೂ ಬೆಲೆ ನೀಡುವುದಿಲ್ಲ. ಇವೆಲ್ಲವೂ ಅಂತ್ಯವಾಗಬೇಕಾದರೆ, ಕಠಿಣ ಕಾನೂನಿನ ಅಗತ್ಯವಿದೆ ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರೊಫೆಸರ್ ರನಿತಾ ಹಿರ್ಜಿ ಹೇಳಿದ್ದಾರೆ.
ನಾನು ವಾಸಿಸುತ್ತಿರುವ ಪ್ರದೇಶದಲ್ಲಿ ಹೆಚ್ಚು ಪೊಲೀಸರನ್ನು ನಾನು ನೋಡಿಲ್ಲ. ಪ್ರತೀನಿತ್ಯ ನಾನು ದ್ವಿಚಕ್ರ ವಾಹನದಲ್ಲಿ ಓಡಾಡುತ್ತೇನೆ. ಸಾರ್ವಜನಿಕ ವಾಹನದ ಮೇಲೆ ನನಗೆ ನಂಬಿಕೆಯಿಲ್ಲ. ಸಾಧ್ಯವಾದಷ್ಟು ಸಾರ್ವಜನಿಕ ವಾಹನದಲ್ಲಿ ಓಡಾಡುವುದನ್ನು ನಿಯಂತ್ರಿಸುತ್ತೇನೆ. ನಗರದಲ್ಲಿರುವ ಪ್ರದೇಶಗಳು ನಿರ್ಜನ ಪ್ರದೇಶಗಳಾಗಿದ್ದು, ಇವು ಮಹಿಳೆಯರಿಗೆ ಸುರಕ್ಷಿತ ಪ್ರದೇಶವಲ್ಲ. ನಾಗರಬಾವಿ ಚಂದ್ರಲೇಔಟ್'ಗೆ ಕೋಚಿಂಗ್ ಕ್ಲಾಸ್'ಗೆ ತೆರಳುತ್ತೇನೆ. ಈ ಪ್ರದೇಶದಲ್ಲಿ ತೆರಳುವಾಗ ಹೃದಯ ಬಾಯಿಗೆ ಬಂದ ಹಾಗೆ ಆಗುತ್ತದೆ ಎಂದು ಎರಡವೇ ವರ್ಷದ ಬಿಎ ಪದವಿ ಮಾಡುತ್ತಿರುವ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿ ವೇದಿಕಾ ಶಿವಂ ಹೇಳಿದ್ದಾರೆ.
ಒಂಟಿಯಾಗಿ ಪ್ರಯಾಣ ಮಾಡುವುದಕ್ಕಿಂತಲೂ ಗುಂಪಿನಲ್ಲಿ, ಜನರೊಂದಿಗೆ ಹೆಣ್ಣುಮಕ್ಕಳು ಪ್ರಯಾಣ ಮಾಡುವುದು ಉತ್ತಮವಾಗಿರುತ್ತದೆ. ಪ್ರಮುಖವಾಗಿ ರಾತ್ರಿ ವೇಳೆ. ನನ್ನ ಮಗಳು ರಾತ್ರಿ ವೇಳೆ ಹೊರ ಹೋದಾಗ ಸಾಕಷ್ಟು ಭಯವಾಗುತ್ತದೆ. ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡುವುದು ನನ್ನ ಪ್ರಕಾರ ಮಹಿಳೆಯರಿಗೆ ಉತ್ತಮವಾಗಿರುತ್ತದೆ. ನಗರದ ಹಲವು ಬೀದಿಗಳಲ್ಲಿ ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಈ ಪ್ರದೇಶಗಳು ಸಾಕಷ್ಟು ಭೀತಿ ಹುಟ್ಟಿಸುತ್ತಿವೆ. ನಗರ ಮಹಿಳಾ ಸ್ನೇಹಿಯಾಗಿರಬೇಕು. ಹೆಚ್ಚು ಮಹಿಳಾ ಪೊಲೀಸರು ಇಲಾಖೆಯಲ್ಲಿರಬೇಕು. ಮಹಿಳೆಯರು ಆರಾಮವಾಗಿ ಪ್ರಯಾಣ ಮಾಡಲು ಮಹಿಳಾ ಚಾಲಕರ ಸಂಖ್ಯೆ ಹೆಚ್ಚಾಗಬೇಕು. ಸಾಮಾಜಿಕ ಜಾಗೃತಿ ಬಗ್ಗೆ ಪುರುಷಕರಿಗೆ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಕ್ರಿಸಾಲಿಸ್ ಹೈ ಸ್ಕೂಲ್ ಮಾಜಿ ಪ್ರಾಂಶುಪಾಲ ದೇವಯಾನಿ ಮಿತ್ರ ತಿಳಿಸಿದ್ದಾರೆ.
ಸಂಜೆ 6.30ರಿಂದ 3.30 ಪಾಳಿಯಲ್ಲಿ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಮಾರತಳ್ಳಿಯಿಂದ ಬೆಳ್ಳಂದೂರು ಆರ್ಎಂಝೆಡ್ ಈಕೋಸ್ಪೇಸ್ ವರೆಗೆ ಆಫೀಸ್ ನಲ್ಲಿ ನೀಡುವ ವಾಹನದಲ್ಲಿಯೇ ಪ್ರಯಾಣಿಸುತ್ತೇನೆ. ನಗರದಲ್ಲಿ ಪೊಲೀಸರ ಸಂಖ್ಯೆ ಅತ್ಯಂತ ವಿರಳವಾಗಿದೆ. ಮಹಿಳೆಯರ ರಕ್ಷಣೆಗೆ ಪೊಲೀಸರ ಸಂಖ್ಯೆ ಹೆಚ್ಚಿಸಬೇಕಿದೆ. ಇದರಿಂದ ಸಾರ್ವಜನಿಕರಿಗೆ ಸುರಕ್ಷಿತ ಎಂಬ ಭಾವನೆ ಮೂಡುತ್ತದೆ. ತುರ್ತುಸೇವಾ ಸಂಖ್ಯೆ 100 ತಲುಪಲು ಕೂಡ ಕೆಲವೊಮ್ಮೆ ತ್ರಾಸದಾಯಕವಾಗಿರುತ್ತದೆ. ಮಹಿಳೆಯರ ಸುರಕ್ಷತೆಗೆ ಪೊಲೀಸರ ಗಸ್ತು ಪಡೆಗಳನ್ನು ಹೆಚ್ಚಿಸಬೇಕೆಂದು ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರವ ಲಿಝಿ ಡಿ ಹೇಳಿದ್ದಾರೆ.
Advertisement