ಮಂಗಳೂರು: 21ನೇ ಶತಮಾನದ ಈ ಮುಂದುವರಿದ ಸಮಾಜದಲ್ಲಿ ಕೂಡ ಹಲವು ಕಡೆಗಳಲ್ಲಿ ಜಾತಿ ತಾರತಮ್ಯ ಜೀವಂತವಾಗಿದೆ ಎಂಬ ಆರೋಪ ಕೇಳಿಬರುತ್ತಲೇ ಇರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಂದಾಳೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಳಜಾತಿಯ ಪೊಲೀಸ್ ಕಾನ್ಸ್ಟೇಬಲ್ ಗಳು ದೇವಸ್ಥಾನದ ಗರ್ಭಗುಡಿ ಬಳಿ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದಾಗ ಮಧ್ಯಾಹ್ನ ಹೊತ್ತು ಬ್ರಾಹ್ಮಣರಿಗೆ ಊಟ ಮಾಡುವ ಹೊತ್ತಿನಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿಗಳು ಕಾನ್ಸ್ಟೇಬಲ್ ಗಳನ್ನು ಹೊರಕ್ಕೆ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೇವಸ್ಥಾನಗ ಗರ್ಭಗುಡಿ ಬಳಿ ಮೇಲ್ಜಾತಿಯ ಬ್ರಾಹ್ಮಣರಿಗೆ ಸುಬ್ರಹ್ಮಣ್ಯ ಷಷ್ಟಿ ಸಂದರ್ಭದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದ್ದ ವೇಳೆ ಈ ಘಟನೆ ನಡೆದಿದ್ದು ಮುಜರಾಯಿ ಇಲಾಖೆ ಈ ಸಂಬಂಧ ವರದಿ ಕೇಳಿದೆ.
ಆದರೆ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ ಎಸ್ ಹರ್ಷ ಹೇಳಿದ್ದಾರೆ. ಇಂತಹ ಯಾವುದೇ ಘಟನೆ ನಡೆದಿಲ್ಲ, ಸ್ಥಳೀಯ ಮಾಧ್ಯಮಗಳು ಊಹೆ ಮಾಡಿ ಸುದ್ದಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಮೂಡಬಿದ್ರಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ, ಕಳೆದ ಸೋಮವಾರ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ದೇವಸ್ಥಾನದಲ್ಲಿ ಭದ್ರತೆ ಕ್ರಮವಾಗಿ ಪೊಲೀಸ್ ಕಾನ್ಸ್ಟೇಬಲ್ ಗಳನ್ನು ನಿಯೋಜಿಸಲಾಗಿತ್ತು. ಈ ಸಮಯದಲ್ಲಿ ಬ್ರಾಹ್ಮಣರಿಗೆ ಊಟ ಮಾಡಲೆಂದು ದೇವಸ್ಥಾನದ ಒಳಾಂಗಣದಿಂದ ಪೊಲೀಸ್ ಕಾನ್ಸ್ಚೇಬಲ್ ಗಳು ಹೊರಗೆ ಹೋಗುವಂತೆ ಹೇಳಲಾಗಿತ್ತು. ಈ ದೇವಸ್ಥಾನ ಮೂಡಬಿದ್ರಿಯಲ್ಲಿದ್ದು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದಿದ್ದಾರೆ.
ದೇವಸ್ಥಾನದ ಒಳಾಂಗಣದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ದಲಿತ ಮಹಿಳಾ ಕಾನ್ಸ್ಟೇಬಲ್ ನ್ನು ಸಹ ಹೊರಗೆ ಕಳುಹಿಸುವಂತೆ ಹೇಳಲಾಯಿತು. ನಂತರ ಸಾಮಾನ್ಯ ವರ್ಗದ ಮಹಿಳಾ ಕಾನ್ಸ್ಟೇಬಲ್ ನ್ನು ನಿಯೋಜಿಸಲಾಗಿತ್ತು. ಇದು ತಮ್ಮ ಗಮನಕ್ಕೆ ಬರಲಿಲ್ಲ ಎಂದು ಪೊಲೀಸರು ಹೇಳುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ವೆಂಕಟೇಶ್, ಈ ಬಗ್ಗೆ ನಾವು ದೇವಸ್ಥಾನದಿಂದ ವರದಿ ಕೇಳಿದ್ದೇವೆ. ತಾವು ದೇವಸ್ಥಾನಕ್ಕೆ ಭೇಟಿ ನೀಡಿ ಜಾತಿ ತಾರತಮ್ಯ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿ ಕೇಳುತ್ತೇವೆ ಎಂದು ಮಂಗಳೂರು ತಾಲ್ಲೂಕು ದತ್ತಿ ನಿರೀಕ್ಷಕರು ತಿಳಿಸಿದ್ದಾರೆ.
Advertisement