ಬೆಂಗಳೂರು: ನಗರದ ಚಾಮರಾಜಪೇಟೆಯ ಮೈಸೂರು ಸರ್ಕಲ್ ಬಳಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದ ವ್ಯಕ್ತಿಯಿಂದ ತಪ್ಪಿಸಿಕೊಳ್ಳುವಲ್ಲಿ 12 ವರ್ಷದ ಶಾಲಾ ಬಾಲಕಿ ಬಚಾವಾಗಿದ್ದಾಳೆ.
ಕಾಟನ್ ಪೇಟೆ ನಿವಾಸಿ ನೀಡಿರುವ ದೂರಿನಲ್ಲಿ, ಸುಮಾರು 35ರಿಂದ 40 ವರ್ಷದ ಅಪರಿಚಿತ ವ್ಯಕ್ತಿ ತನ್ನ ಮಗಳನ್ನು ಆಟೋರಿಕ್ಷಾದಲ್ಲಿ ಅಪಹರಿಸಿ ಆಕೆಯ ಕಿವಿಯೋಲೆ ಮತ್ತು ಬೆಳ್ಳಿ ಕಾಲುಚೈನು ಕಿತ್ತುಕೊಂಡು ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ.
ಆತ ಅಪಹರಿಸುವ ಸಮಯದಲ್ಲಿ ತನ್ನ 7ನೇ ತರಗತಿಯಲ್ಲಿ ಓದುತ್ತಿರುವ ಮಗಳು ಟ್ಯುಟೋರಿಯಲ್ ಕ್ಲಾಸ್ ಗೆಂದು ಹೊರಟಿದ್ದಳು. ಎಂಎನ್ ಲೇನ್ ನಲ್ಲಿರುವ ಶಿವಾಲಯ ಲಾಡ್ಜ್ ಹತ್ತಿರ ಮಗಳು ಹೋಗುತ್ತಿದ್ದಾಗ ನಿಮ್ಮ ತಂದೆ ನನ್ನನ್ನು ಕಳುಹಿಸಿದ್ದು ತನ್ನ ಜೊತೆ ಆಟೋದಲ್ಲಿ ಬರುವಂತೆ ಹೇಳಿದ್ದ. ನಮ್ಮ ಮಗಳು ನಿರಾಕರಿಸಿದಾಗ ಒತ್ತಾಯಪೂರ್ವಕವಾಗಿ ಆಟೋರಿಕ್ಷಾದಲ್ಲಿ ಕೂರಿಸಿ ನಿರ್ಗಮಿತ ಪ್ರದೇಶಕ್ಕೆ ಕರೆದುಕೊಂಡು ಹೋದ ಎಂದಿದ್ದಾರೆ.
ದುಷ್ಕರ್ಮಿ ಆಟೋ ಚಾಲಕ ವಾಹನ ನಿಲ್ಲಿಸಿ ಇಲ್ಲಿ ಸುತ್ತಮುತ್ತ ಕಳ್ಳರಿದ್ದಾರೆ, ಆಭರಣಗಳನ್ನು ಕೊಡು ಎಂದು ಪೀಡಿಸಿದ. ಬಾಲಕಿ ಆತನ ಮೇಲಿನ ಭಯದಿಂದ ಆಭರಣಗಳನ್ನು ಕೊಟ್ಟಾಗ ಆಕೆಯ ಬಟ್ಟೆಯನ್ನು ದೇಹದಿಂದ ಕಳಚಲು ಯತ್ನಿಸಿದ. ಆಗ ಜಾಗೃತಳಾದ ಬಾಲಕಿ ಆತನನ್ನು ತಳ್ಳಿ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ.
ರಸ್ತೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕಂಡು ಅವರಿಗೆ ಎಲ್ಲಾ ವಿಷಯಗಳನ್ನು ವಿವರಿಸಿದಳು, ನಂತರ ತಂದೆಗೆ ಫೋನ್ ಮಾಡಿದಳು. ಪೊಲೀಸ್ ಸಿಬ್ಬಂದಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು, ಅಲ್ಲಿಗೆ ಆಕೆಯ ತಂದೆಯನ್ನು ಕೂಡ ಬರಹೇಳಿದ್ದರು.
ಆಟೋಚಾಲಕ ನನ್ನ ಹೆಸರು ಹೇಳಿದ್ದರಿಂದ ಮಗಳು ನಂಬಿ ಆಟೋದಲ್ಲಿ ಹೋದಳು, ದೇವರ ದಯೆಯಿಂದ ಏನೂ ತೊಂದರೆಯಾಗದೆ ಸುರಕ್ಷಿತವಾಗಿ ಮರಳಿದ್ದಾಳೆ. ಪೊಲೀಸರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ, ಈ ರೀತಿ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ನಮ್ಮ ನೆರೆಮನೆಯ ಬಾಲಕಿಯನ್ನು ಸಹ ಈ ರೀತಿ ಅಪಹರಿಸಲಾಗಿತ್ತು ಎಂದು ಬಾಲಕಿಯ ತಂದೆ ಹೇಳಿದ್ದಾರೆ.
Advertisement