ಬಾಗಲಕೋಟೆ: ಬಾದಾಮಿಯ ಬನಶಂಕರಿಯಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಟ್ಟಡದಲ್ಲಿಯೇ ಕನ್ನಡ ಹಂಪಿ ವಿವಿಯ ಬಾದಾಮಿ ಕೇಂದ್ರ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಹಂಪಿ ವಿವಿಯ ಬಾದಾಮಿ ಕೇಂದ್ರವನ್ನು ತೆರವುಗೊಳಿಸುವಂತೆ ನೋಟಿಸ ನೀಡಿತ್ತು. ಕಟ್ಟಡವನ್ನು ೩೦ ವರ್ಷ ಲೀಸ್ ಮೇಲೆ ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ಲೀಸ್ ಅವಧಿ ಪೂರ್ಣಗೊಂಡಿದ್ದು, ಕಟ್ಟಡವನ್ನು ತೆರವುಗೊಳಿಸುವಂತೆ ಸೂಚಿಸಿತ್ತು.
ಹಂಪಿ ವಿವಿಯ ವರ್ಣಶಿಲ್ಪ ಮತ್ತು ಚಿತ್ರಕಲಾ ತರಬೇತಿ ಕೇಂದ್ರ ನಡೆಯುತ್ತಿದ್ದ ಈ ಕೇಂದ್ರವನ್ನು ತೆರವುಗಳಿಸವಂತೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನೀಡಿದ್ದ ನೋಟಿಸ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಾದಾಮಿ ನಗರದ ಅಭಿವೃದ್ಧಿ ಹೋರಾಟ ಸಮಿತಿ, ವಿಶ್ವಚೇತನ ಅಲ್ಲದೆ ಅನೇಕ ಸಂಘ ಸಂಸ್ಥೆಗಳು ಹಂಪಿ ವಿವಿ ಕೇಂದ್ರ ಉಳಿವಿಗಾಗಿ ಹೋರಾಟ ನಡೆಸಿದ್ದವು.
ಗಣ್ಯರು, ಇತಿಹಾಸ ತಜ್ಞರು, ಕಲಾಪ್ರಿಯರು ಮತ್ತು ಕೇಂದ್ರದ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಬಾದಾಮಿ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ಹಂಪಿ ವಿವಿ ಕೇಂದ್ರವನ್ನು ಉಳಿಸಿಕೊಳ್ಳುವ ಜತೆಗೆ ಮಂಜೂರಾಗಿರುವ ತ್ರಿಸ್ಟಾರ್ ಹೋಟೆಲ್ ನಿರ್ಮಾಣಕ್ಕೂ ಅವಕಾಶ ಕಲ್ಪಿಸುವ ಗುರುತರ ಜವಾಬ್ದಾರಿ ನಿರ್ವಹಿಸುವಂತೆ ಒತ್ತಡಗಳು ಹೆಚ್ಚಾಗಿದ್ದವು.
ಕ್ಷೇತ್ರದ ಜನತೆಯ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ, ಬಾದಾಮಿಯಿದಲೇ ಪ್ರವಾಸೋದ್ಯಮ ಸಚಿವರಿಗೆ ಕರೆ ಮಾಡಿ ಹಂಪಿ ವಿವಿ ಕೇಂದ್ರ ಇರುವ ಕಟ್ಟಡದಲ್ಲೇ ಮುಂದುವರಿಸಿ, ಹೋಟೆಲ್ ಬೇರೆ ಜಾಗೆದಲ್ಲಿ ನಿರ್ಮಿಸಿ ಎಂದು ಕೇಳಿಕೊಂಡಿದ್ದರು. ಜನತೆಯ ಹೋರಾಟ ಮತ್ತು ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದನೆ ಮಾಡಿರುವ ಸರ್ಕಾರ ಗುರುವಾರ ನಡೆದದ ಸಂಪುಟ ಸಭೆಯಲ್ಲಿ ಹಂಪಿ ವಿವಿಯ ಬಾದಾಮಿ ಕೇಂದ್ರವನ್ನು ಈಗಿರುವ ಪ್ರವಾಸೋದ್ಯಮ ಕಟ್ಟಡದಲ್ಲಿಯೇ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ.
ಹಂಪಿ ವಿವಿ ಬಾದಾಮಿ ಕೇಂದ್ರ ತೆರವಿನ ಕುರತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನೋಟಿಸ್ ನೀಡಿದ ಬೆನ್ನಲ್ಲೇ “ಕನ್ನಡಪ್ರಭ.ಕಾಮ್ ನ್ಯೂಸ್ ಪೋರ್ಟಲ್” ಈ ಕುರಿತು ಸುದ್ದಿ ಪ್ರಕಟಿಸಿದ್ದನ್ನು ಸ್ಮರಿಸಬಹುದಾಗಿದೆ.
-ವಿಠ್ಠಲ ಆರ್. ಬಲಕುಂದಿ
Advertisement