ಬೆಂಗಳೂರು: ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಾವಿನ ಬಗ್ಗೆ ಮೃತರ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೊಸಕೋಟೆಯ ಹಿಂಡಿಗನಾಳ ನಿವಾಸಿ ಶಿಲ್ಪಾ (27) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ನಾಗೇಶ್ ಎಂಬವರನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಶಿಲ್ಪಾ ಅವರ ಮೃತದೇಹ ಹೂಡಿಯ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಮಹದೇವಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ದಂಪತಿ ನಡುವೆ ಇತ್ತೀಚೆಗೆ ಆಗಾಗ ಜಗಳ ಉಂಟಾಗುತ್ತಿತ್ತು. ಪತಿಯ ಮನೆಯವರು ಆಕೆಗೆ ಕಿರುಕುಳ ನೀಡುತ್ತಿದ್ದರು. ಈ ಹಿಂದೆ ಎರಡೂ ಕುಟುಂಬದ ಹಿರಿಯರನ್ನು ಕರೆಸಿ ಇಬ್ಬರಿಗೂ ಬುದ್ದಿವಾದ ಹೇಳಲಾಗಿತ್ತು. ಆದರೆ ಈಗ ಆಕೆಯನ್ನು ಪತಿಯ ಕಡೆಯುವರು ನೇಣು ಹಾಕಿ ಕೊಂದಿದ್ದಾರೆ ಎಂದು ಮೃತಳ ಪೋಷಕರು ದೂರಿದ್ದಾರೆ.
Advertisement