ಹನೂರು: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ದೇವಾಲಯ ವಿಷ ಪ್ರಸಾದ ದುರಂತ ಪ್ರಕರಣ ನಡೆದು ನಾಳೆಗೆ ಒಂದು ವರ್ಷ ಆಗುತ್ತಿದೆ. ಆದರೆ, ಸಾವಿನಿಂದ ಪಾರಾದ ಕೆಲವರು ಇಂದಿಗೂ ವಿಕಲಾಂಗರಾಗಿ ಜೀವನ ನಡೆಸಬೇಕಾಗಿದ್ದು,ತೀವ್ರ ಯಾತನೆ ಅನುಭವಿಸುತ್ತಿದ್ದಾರೆ. ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರುಡುತ್ತಾರೆ.
ವಿಷ ಪ್ರಸಾದ ತಿಂದಾಗಲೇ ನಾನು ಸಾಯಬೇಕಿತ್ತು.ಆಹಾರ ಹಾಗೂ ಮತ್ತಿತರ ಅಗತ್ಯ ವಸ್ತುಗಳ ಮೇಲೆ ಎಷ್ಟು ದಿನ ಬೇರೆಯವರ ಮೇಲೆ ಅವಲಂಬನೆಯಾಗುವುದು, ಈ ಜೀವನ ನಡೆಸುವುದಕ್ಕಿಂತ ಸಾಯುವುದೇ ಲೇಸು ಎಂದು ಕಣ್ಣೀರಿಡುತ್ತಾರೆ ರಾಜಮ್ಮ.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಉಚಿತ ಚಿಕಿತ್ಸೆ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಕರ್ಯಗಳಿಲ್ಲದ ಕಾರಣ ಆರೋಗ್ಯಕ್ಕಾಗಿ ಈಗಾಗಲೇ 50 ಸಾವಿರ ವೆಚ್ಚ ಮಾಡಿರುವುದಾಗಿ ಅವರು ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ. ಇದು ರಾಜಮ್ಮ ಅವರೊಬ್ಬರ ಕಥೆ ಅಲ್ಲ.
ಕರ್ನಾಟಕ- ತಮಿಳುನಾಡು ಗಡಿಭಾಗ ಸುಳ್ವಾಡಿಯ ಕಿಚುಗುಟ್ಟಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ತಿಂದ ಸುಮಾರು 100 ಸಂತ್ರಸ್ತರ ಭವಿಷ್ಯ ಮಂಕಾಗಿದೆ. ಕೆಲವರು ಬೀದಿ ಬದಿಗಳಲ್ಲಿ ಭೀಕ್ಷೆ ಬೇಡುತ್ತಿದ್ದರೆ, ಬಹುತೇಕ ಮಂದಿ ವಿಕಲಾಂಗರಾಗಿದ್ದಾರೆ. ಹೊಲಗಳಿಗೆ ತೆರಳಿ ಕೆಲಸ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ವಿಷ ಪ್ರಸಾದ ದುರಂತದಲ್ಲಿ ಐವರು ಮಹಿಳೆಯರು , ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 17 ಮಂದಿ ಮೃತಪಟ್ಟಿದ್ದರು.
ಈ ಕುಟುಂಬಗಳು ವಾಸಿಸುತ್ತಿರುವ ಮಲೆ ಮಹಾದೇಶ್ವರ ಬೆಟ್ಟದ ಅಂಚಿನಲ್ಲಿರುವ ಸುಳ್ವಾಡಿ, ಬಿದರನಹಳ್ಳಿ , ದೊರಸ್ವಾಮಿ ಮೇಡು ಮತ್ತಿತರ ಕಡೆಗಳಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಭೇಟಿ ನೀಡಿದಾಗ, ಎಲ್ಲರೂ ತಮ್ಮ ಭಯಾನಕ ಕಥೆಗಳನ್ನು ಹೇಳಿಕೊಂಡರು. ದೇವಾಲಯಕ್ಕೆ ತೆರಳಿ ವಿಷ ಪ್ರಸಾದ ಸೇವನೆ ಬಳಿಕ ಹುಟ್ಟಹುಬ್ಬದಂದೆ ಮೃತಪಟ್ಟ ಆರು ವರ್ಷದ ಮಗ ಷಣ್ಮುಗಂ ಪೋಟೋ ನೋಡಿ ಅವರ ತಾಯಿ ಮಾದಮ್ಮ, ಈಗಲೂ ತೀವ್ರ ದು:ಖಪಡುತ್ತಾರೆ. ತನ್ನಿಬ್ಬರು ಮಕ್ಕಳಿಗೆ ಪ್ರಸಾದ ನೀಡಿದಿದ್ದರಿಂದ ಅವರು ಬದುಕುಳಿದಿದ್ದಾಗಿ ತಿಳಿಸಿದರು.
ದುರ್ಘಟನೆಯಲ್ಲಿ ತನ್ನ ಕುಟುಂಬವನೆಲ್ಲಾ ಕಳೆದುಕೊಂಡಿದ್ದೇನೆ. ತನ್ನ ಪತ್ನಿಯೂ ಮಾನಸಿಕ ಖಿನ್ನತೆಕೊಳಗಾಗಿದ್ದಾರೆ. ನಾನು ಯಾವಾಗಲಾದರೂ ಸಾಯಬಹುದು, ನನ್ನ ಮೊಮ್ಮಗಳನ್ನು ಯಾರಾದರೂ ನೋಡಿಕೊಳ್ಳಬೇಕಾಗುತ್ತದೆ ಎಂದು ನೋವು ತೋಡಿಕೊಂಡಿರು 80 ವರ್ಷದ ನಾಲಾ. ದೇವಾಲಯ ವಿಷ ಪ್ರಸಾದ ಸೇವಿಸಿ ನಾಲಾ ಅವರ ಮಗ, ಸೊಸೆ, ಮೊಮ್ಮಗ ಮೃತಪಟ್ಟಿದ್ದರು.
ಆಗ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಮೃತ ಪಟ್ಟ ಕುಟುಂಬ ಸದಸ್ಯರಿಗೆ 12 ಲಕ್ಷ , ಸಂತ್ರಸ್ತರಿಗೆ 1. 5 ಲಕ್ಷ ಪರಿಹಾರ 25 ಕೆಜಿ ಅಕ್ಕಿ, ಬೆಳೆ, ನಿವೇಶನ ಹಾಗೂ ಎರಡು ಎಕರೆ ಜಮೀನು ನೀಡುವ ಭರವಸೆ ನೀಡಿದ್ದರು. ಆದರೆ, ಇದು ಇಲ್ಲಿಯವರೆಗೂ ಅನುಷ್ಠಾನವಾಗಿಲ್ಲ.
ಮುಂದಿನ ಎರಡು ವರ್ಷಗಳಿಗೆ ಆಗುವಷ್ಟು ಕೂಡಲೇ 25 ಕೆಜಿ ಅಕ್ಕಿ ಹಾಗೂ ಬೆಳೆಯನ್ನು ಸರ್ಕಾರ ನೀಡುವಂತೆ ಸಂತ್ರಸ್ತರ ಕುಟುಂಬಸ್ಥರು ಒತ್ತಾಯಿಸುತ್ತಾರೆ. ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ನೀಡಲು ಬಿದರನಹಳ್ಳಿ ಬಳಿ ಕಂದಾಯ ಇಲಾಖೆ ಅಧಿಕಾರಿಗಳು 20 ಎಕರೆ ಜಮೀನನ್ನು ಗುರುತಿಸಿದ್ದಾರೆ. ಸರ್ಕಾರ ಅನುಮತಿಗಾಗಿ ಕೋರಿರುವುದಾಗಿ ಜಿಲ್ಲಾಧಿಕಾರಿ ಕಾವೇರಿ ಹೇಳುತ್ತಾರೆ.
Advertisement