ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ತಡವಾಗಿ ಆಗಮಿಸುವ ಅಂಬ್ಯುಲೆನ್ಸ್ ಗಳಿಗೆ ದಂಡ ವಿಧಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಅಲ್ಲದೇ ರಾಜ್ಯದಲ್ಲಿ ಹೊಸದಾಗಿ 300 ಅಂಬ್ಯುಲೆನ್ಸ್ ಗಳನ್ನು ಕಾರ್ಯಗತಗೊಳಿಸಲು 150 ಕೋಟಿ ರೂ. ವೆಚ್ಚದ ಪ್ರಸ್ತಾವವನ್ನು ಅನುಮೋದನೆಗಾಗಿ ಸಂಪುಟಕ್ಕೆ ಕಳುಹಿಸಿದೆ.
ಪ್ರಸ್ತಾವನೆಯಲ್ಲಿರುವಂತೆ 20 ನಿಮಿಷದೊಳಗೆ ಸೇವೆ ನೀಡುವಲ್ಲಿ ವಿಫಲವಾದಲ್ಲಿ ಸೇವಾ ಪೂರೈಕೆದಾರರು ಪ್ರತಿ ನಿಮಿಷಕ್ಕೂ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಅಂಬ್ಯುಲೆನ್ಸ್ ಚಾಲಕರ ಕುಡಿದು ವಾಹನ ಚಾಲನೆ ಹಾಗೂ ಸೇವೆಯನ್ನೂ ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲೂ ಇಬ್ಬರು ಸದಸ್ಯರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗುವುದು, ನಗರ ಪ್ರದೇಶಗಳಲ್ಲಿ 20 ನಿಮಿಷ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 30 ನಿಮಿಷದೊಳಗೆ ನಿಗದಿತ ಸ್ಥಳಕ್ಕೆ ತಲುಪದಿದ್ದರೆ ಹೆಚ್ಚುವರಿ ಪ್ರತಿ ನಿಮಿಷಕ್ಕೂ 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಉಪ ನಿರ್ದೇಶಕ ಡಾ. ಸ್ವಾತಂತ್ರ ಕುಮಾರ್ ಬ್ಯಾಂಕರ್ ತಿಳಿಸಿದ್ದಾರೆ.
ಅಂಬ್ಯುಲೆನ್ಸ್ ಗಳಿಗೆ ಕರೆ ಮಾಡಲು ನೆರವಾಗುವಂತೆ ನಾಗರಿಕ ಆಪ್ ವೊಂದನ್ನು ಸೃಷ್ಟಿಸಲಾಗುತ್ತಿದೆ. ಇದರಿಂದ ದೂರುಗಳು ಹಾಗೂ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆ ಬಗ್ಗೆ ತಿಳಿಯಬಹುದಾಗಿದೆ. ಅಂಬ್ಯುಲೆನ್ಸ್ ಗಳ ನಿರ್ವಹಣೆಗಾಗಿ ಪ್ರತ್ಯೇಕ ಜಿಲ್ಲಾ ನಿರ್ವಹಣಾ ಘಟಕ ಸ್ಥಾಪಿಸಲಾಗುವುದು, ಇದರಿಂದ ಅಂಬ್ಯುಲೆನ್ಸ್ ಗಳು, ಆಸ್ಪತ್ರೆಗಳ ನಡುವಣ ಸಂವಹನ ಸಾಧಿಸಲು ನೆರವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
108 ತುರ್ತು ಸೇವಾ ವ್ಯವಸ್ಥೆಯಲ್ಲಿ 711 ಅಂಬ್ಯುಲೆನ್ಸ್ ಗಳನ್ನು ಆರೋಗ್ಯ ಇಲಾಖೆ ಹೊಂದಿದ್ದು, 200 ಅಂಬ್ಯುಲೆನ್ಸ್ ಗಳನ್ನು ಬದಲಾಯಿಸಲು ಗುರುತಿಸಲಾಗಿದೆ. ಪ್ರತಿ 90 ಸಾವಿರ ರೋಗಿಗಳಿಗಾಗಿ ಇದೀಗ ಒಂದು ಅಂಬ್ಯುಲೆನ್ಸ್ ಇದೆ. ಒಂದು ವೇಳೆ ಹೆಚ್ಚುವರಿಯಾಗಿ 300 ಅಂಬ್ಯುಲೆನ್ಸ್ ಗಳನ್ನು ಸೇರಿಸಿದರೆ 50 ಸಾವಿರ ರೋಗಿಗಳಿಗೆ ಒಂದು ಅಂಬ್ಯುಲೆನ್ಸ್ ಆಗಲಿದೆ ಎಂದು ಬ್ಯಾಂಕರ್ ತಿಳಿಸಿದ್ದಾರೆ.
Advertisement