ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತ ಪಾಠವನ್ನು ಶಾಲಾ ಮಕ್ಕಳ ಪಠ್ಯಕ್ಕೆ ಸೇರಿಸುವ ಕುರಿತು ಸಮಿತಿ ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಇಲಾಖೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಸಮಿತಿ ವರದಿ ಇನ್ನೂ ಕೈ ಸೇರಿಲ್ಲ. ಹೀಗಾಗಿ ಟಿಪ್ಪು ಸುಲ್ತಾನ್ ಕುರಿತ ಪಾಠವನ್ನು ಶಾಲಾ ಮಕ್ಕಳ ಪಠ್ಯಕ್ಕೆ ಸೇರಿಸುವ ಕುರಿತು ಅಂತಿಮ ನಿರ್ಣಯ ಕೈಗೊಂಡಿಲ್ಲ. ಸಮಿತಿ ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ವಿಧಾನಸೌಧ-ವಿಕಾಸ ಸೌಧದ ಸಚಿವಾಲಯಗಳ ಸೇವೆಗಳೂ ಸಕಾಲ ಯೋಜನೆ ವ್ಯಾಪ್ತಿಗೆ
ಇದೇ ವೇಳೆ ವಿಧಾನಸೌಧ-ವಿಕಾಸ ಸೌಧದ ಸಚಿವಾಲಯಗಳ ಸೇವೆಗಳೂ ಸಕಾಲ ಯೋಜನೆ ವ್ಯಾಪ್ತಿಗೆ ಬರಲಿವೆ ಎಂದು ಮಾಹಿತಿ ನೀಡಿದ ಅವರು, 'ಸಚಿವಾಲಯದ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದು, ವಿಧಾನಸೌಧ ಸಚಿವಾಲಯದ ಸೇವೆಗಳನ್ನು ಸಕಾಲದ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳುತ್ತೇವೆ. ವಿಧಾನಸೌಧ, ವಿಕಾಸ ಸೌಧದಲ್ಲಿ ಹಲವು ಅರ್ಜಿಗಳು ವಿಲೇವಾರಿಯಾಗದೇ ಸಾರ್ವಜನಿಕರು ಕಾಯುತ್ತಿರುವುದು ಹೆಚ್ಚಾಗುತ್ತಿವೆ. ಹೀಗಾಗಿ ಸಚಿವಾಲಯದ ಸೇವೆಗಳನ್ನೂ ಸಕಾಲ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಕಾಲ ಯೋಜನೆ ಕಾರ್ಯಪಾಲನಾ ವರದಿ ಬಿಡುಗಡೆ ಮಾಡಿದ ಅವರು, ಇದುವರೆಗೆ ಸಕಾಲ ಯೋಜನೆಯಡಿ 20,45,31,702ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಅಕ್ಟೋಬರ್ ನಲ್ಲಿ ಚಿಕ್ಕಬಳ್ಳಾಪುರ, ನವೆಂಬರ್ ನಲ್ಲಿ ಯಾದಗಿರಿ ಜಿಲ್ಲೆ ಅತ್ಯುತ್ತುಮ ಸಾಧನೆಮಾಡಿ ಅಗ್ರ ಸ್ಥಾನಕ್ಕೇರಿವೆ. ಬೆಂಗಳೂರು ನಗರ ಜಿಲ್ಲೆ ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಅದರಲ್ಲೂ ಬಿಬಿಪಿಎಂಪಿ ತೀರಾ ಹಿಂದುಳಿದಿದೆ. ಹಾಗಾಗಿ ಬಿಬಿಎಂಪಿಯ ಬಗ್ಗೆ ಪ್ರತ್ಯೇಕ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಬೀದರ್ ಜಿಲ್ಲೆ ಹಾಗೂ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ, ಕೆಐಡಿಬಿ, ಐಟಿ-ಬಿಟಿ ಇಲಾಖೆಗಳು ಅತಿ ಹೆಚ್ಚು ಸಕಾಲ ಅರ್ಜಿಗಳನ್ನು ತಿರಸ್ಕರಿಸಿದ್ದು, ಇದಕ್ಕೆ ಕಾರಣಗಳನ್ನು ಪತ್ತೆ ಹಚ್ಚಲು ಶೀಘ್ರದಲ್ಲೇ ಇಲಾಖಾವಾರು ಪ್ರಗತಿ ಪರಿಶೀಲನೆ ಮಾಡುವುದಾಗಿ ಪರಮೇಶ್ವರ್ ಹೇಳಿದರು. ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯಿಂದ ಹೆಚ್ಚು ಅರ್ಜಿಗಳು ಸ್ವೀಕರಿಸಲಾಗಿದೆ. ಸಕಾಲ ವ್ಯಾಪ್ತಿಗೆ ಬರುವ ಒಟ್ಟು 91 ಇಲಾಖೆಗಳ 1033 ಸೇವೆಗಳ ಪೈಕಿ ಅಕ್ಟೋಬರ್ ನಲ್ಲಿ 14,307 ಅರ್ಜಿಗಳು ಅವಧಿ ಮೀರಿ ಬಾಕಿ ಉಳಿದಿದ್ದರೆ, ನವಂಬರ್ ತಿಂಗಳಲ್ಲಿ 20,601ಅರ್ಜಿಗಳು ಅವಧಿ ಮೀರಿ ಬಾಕಿ ಉಳಿದುಕೊಂಡಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆಯ 202 ಕಚೇರಿಗಳಿಗೆ ಇದುವರೆಗೆ ಒಂದೇ ಒಂದು ಸಕಾಲ ಅರ್ಜಿ ಬಂದಿಲ್ಲ. ಅದೇ ರೀತಿ ಇಂಧನ ಇಲಾಖೆಯ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ 330 ಕಚೇರಿಗಳಿಗೂ ಸಹ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ 37 ಕಚೇರಿಗಳಿಗೆ, ಬೆಂಗಳೂರು ನಗರ ಜಿಲ್ಲೆಯ 824 ಕಚೇರಿಗಳಲ್ಲೂ ಅರ್ಜಿಗಳು ಸಲ್ಲಿಕೆಯಾಗಿಲ್ಲ ಎಂದು ಸುರೇಶ್ ಕುಮಾರ್ ವಿವರ ನೀಡಿದರು.
Advertisement