ಚಾಮರಾಜನಗರ : ಬಂಜೆ ಎಂದು ಸೊಸೆಗೆ ಬೆಂಕಿ ಹಚ್ಚಿದ ಪಾಪಿಗಳಿಗೆ ಜೀವಾವಧಿ ಶಿಕ್ಷೆ

ಬಂಜೆ ಎಂದು ಸೊಸೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗಳಿಗೆ ಜಿಲ್ಲಾ ಸೆಷನ್ಸ್ ಮತ್ತು ಪ್ರಧಾನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಬಂಜೆ ಎಂದು ಸೊಸೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗಳಿಗೆ ಜಿಲ್ಲಾ ಸೆಷನ್ಸ್ ಮತ್ತು ಪ್ರಧಾನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬೆಳ್ಳಮ್ಮ, ರಮೇಶ, ದೊಡ್ಡಮ್ಮ  ಅವರಿಗೆ ಸೆಷನ್ಸ್ ನ್ಯಾಯಾಲಯ ಶಿಕ್ಷೆಗೆ ಗುರಿಪಡಿಸಿದೆ. 2007 ರಲ್ಲಿ ಕನ್ನಹಳ್ಳಿಮೋಳೆ ಗ್ರಾಮದ ಮಂಜುಳಾ ಮತ್ತು ಬೆಂಡರವಾಡಿ ಗ್ರಾಮದ ಚಿಕ್ಕಮಾದಶೆಟ್ಟಿಯ ಮಗ ಮಹೇಶ್ ವಿವಾಹವಾಗಿತ್ತು‌. 

ಮದುವೆಯಾಗಿ 7 ವರ್ಷಗಳಾದ್ರು ಮಕ್ಕಳಾಗದಿದ್ದರಿಂದ 21-11-2013 ರಲ್ಲಿ ಮಂಜುಳಾಗೆ ಅತ್ತೆ ಬೆಳ್ಳಮ್ಮ, ಮೈದುನ ರಮೇಶ, ವಾರಗಿತ್ತಿ ದೊಡ್ಡಮ್ಮ ಎನ್ನುವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು‌. ಪೊಲೀಸರು, ತಹಶಿಲ್ದಾರ್ ಅವರಿಗೆ ನೀಡಿದ ಮರಣಪೂರ್ವ ಹೇಳಿಕೆಯಲ್ಲಿ ಅತ್ತೆ ಬೆಳ್ಳಮ್ಮ, ಮಾವ ಚಿಕ್ಕಮಾದಶೆಟ್ಟಿ, ಮೈದುನನಾದ ರಮೇಶ್​, ರಂಗಸ್ವಾಮಿ ಹಾಗೂ ವಾರಗಿತ್ತಿ ದೊಡ್ಡಮ್ಮರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು ಎಂದು ಹೇಳಿದ್ದರು. 

ಬೆಳ್ಳಮ್ಮ, ರಮೇಶ್​ ಹಾಗೂ ದೊಡ್ಡಮ್ಮರ ಮೇಲಿನ ಆರೋಪ ಸಾಬೀತಾಗಿದ್ದರಿಂದ ಜಿಲ್ಲಾ ಸೆಷನ್ಸ್ ಮತ್ತು ಪ್ರಧಾನ ನ್ಯಾ. ಡಿ.ವಿನಯ್ ಮೂವರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಪೂರಕ ಸಾಕ್ಷಿಗಳಿಲ್ಲದಿದ್ದರಿಂದ ಮಾವ ಚಿಕ್ಕಮಾದಶೆಟ್ಟಿ, ಮೈದುನ ರಂಗಸ್ವಾಮಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದ್ದು, ಸರ್ಕಾರಿ ಅಭಿಯೋಜಕರಾಗಿ ಎಂ.ಎಸ್. ಉಷಾ ವಾದ ಮಂಡಿಸಿದರು.

ವರದಿ:-ಗೂಳಿಪುರ ನ೦ದೀಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com