ಬೆಂಗಳೂರು: ಪ್ರತಿಭಟನಾಕಾರರ ಮೇಲೆ ಮಂಗಳೂರು ಪೊಲೀಸರು ನಡೆಸಿದ ಗೋಲಿಬಾರ್ ಪ್ರಕರಣ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಪ್ರತಿಭಟನಾ ಸ್ಥಳದಲ್ಲಿದ್ದ ಪೊಲೀಸರ ಮಾತುಕತೆಯ ವಿಡಿಯೋವೊಂದನ್ನು ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಫೈರ್ ಮಾಡಿದರೂ, ಒಂದು ಗುಂಡೂ ಕೂಡ ಬೀಳಲಿಲ್ಲ. ಒಬ್ಬರೂ ಸಾಯಲಿಲ್ಲ ಎಂದು ಸಮವಸ್ತ್ರದಲ್ಲಿರುವ ಪೊಲೀಸ್ ಒಬ್ಬರು ಇತರೆ ಪೊಲೀಸರಿಗೆ ಹೇಳುತ್ತಿರುವುದು ಕಂಡು ಬಂದಿದೆ. ಇದಲ್ಲದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಆಸ್ಪತ್ರೆಯಲ್ಲಿ ನಡೆಸಿರುವ ದಾಂಧಲೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಎರಡೂ ವಿಡಿಯೋಗಳ ಕುರಿತು ಕಾಂಗ್ರೆಸ್ ತೀವ್ವರ ಖಂಡನೆ ವ್ಯಕ್ತಪಡಿಸಿದೆ. ಪೊಲೀಸರು ಆತಂಕದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ನನ್ನ ನೇತೃತ್ವದ 5 ವರ್ಷಗಳ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಮಗೆ ಬಂದೂಕುಗಳ ನೆನಪೇ ಆಗಲಿಲ್ಲ. ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಗೊಬ್ಬರ ಕೇಳಿದರು ಎಂದು ಇಬ್ಬರು ರೈತರ ಮೇಲೆ (ಹಾವೇರಿಯಲ್ಲಿ) ಗೋಲಿಬಾರ್ ಮಾಡಿಸಿದ್ದರು. ಎರಡನೇ ಅವಧಿಯಲ್ಲಿ ಇಬ್ಬರು ಅಮಾಯಕರನ್ನು ಗೋಲಿಬಾರ್'ಗೆ ಬಲಿ ಕೊಟ್ಟರು ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಇದೇ ವೇಳೆ ಇತಿಹಾಸಕಾರ ರಾಮಚಂದ್ರ ಗುಹಾ ಅವರ ಬಂಧನಕ್ಕೂ ಸಿದ್ದರಾಮಯ್ಯ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ದೇಶ ಅಸಂವಿಧಾನಿಕವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಮಾತನಾಡಿ, ಸೆಕ್ಷನ್ 144 ಜಾರಿ ಮಾಡಿರುವುದಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಬೇಕು. ಕರ್ನಾಟಕ ಹಾಗೂ ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ. ಕೇಂದ್ರ ಸರ್ಕಾರ ಜನರನ್ನು ಹತ್ಯೆ ಮಾಡುತ್ತಿದೆ. ಮೊದಲು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ಪ್ರಕರಣ ದಾಖಲಾಗಬೇಕು ಎಂದು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಶಾಂತಿಯುತ, ಪ್ರಗತಿಪರ ದೇಶವೆಂದು ಬಿರುದು ಪಡೆದುಕೊಂಡಿದೆ. ಇಂತಹ ದಸಕಗಳ ಶ್ರಮ ಬಿಜೆಪಿ ಆಳ್ವಿಕೆಯಲ್ಲಿ ನಾಶಗೊಳ್ಳುತ್ತಿದೆ. ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದ್ದು, ಮಂಗಳೂರಿನಲ್ಲಿ ಸಾವು, ವಿದ್ಯಾರ್ಥಿಗಳು, ಚಿಂತಕರು, ತಜ್ಞರ ಬಂಧನ ಇದಕ್ಕೆ ಕಳಂಕವನ್ನು ತಂದಿದೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಗೆ ಯಾವುದೇ ಅಧಿಕಾರಿಗಳೂ ಜವಾಬ್ದಾರರಲ್ಲ. ಸರ್ಕಾರದ ನಿರ್ದೇಶನದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಇದಕ್ಕೆ ಕಾರಣ ಎಂದಿದ್ದಾರೆ.
Advertisement