ಸುಪಾರಿ ನೀಡಿ ಪತ್ನಿಯನ್ನು ಕೊಲೆ‌ ಮಾಡಿಸಿದ ಪತಿ ಸೇರಿ ಇಬ್ಬರ ಬಂಧನ

ಸುಪಾರಿ ನೀಡಿ ಪತ್ನಿಯನ್ನು ಕೊಲೆ ಮಾಡಿಸಿದ್ದ ಪತಿ ಸೇರಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸುಪಾರಿ ನೀಡಿ ಪತ್ನಿಯನ್ನು ಕೊಲೆ ಮಾಡಿಸಿದ್ದ ಪತಿ ಸೇರಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. 

ಪತಿ ನರೇಂದ್ರ ಬಾಬು (39), ಆಟೋ ಚಾಲಕರಾದ ಪ್ರಶಾಂತ್ ( 27), ಜಗನ್ನಾಥ್ (27) ಬಂಧಿತ ಆರೋಪಿಗಳು. ತಮ್ಮ ಪುತ್ರಿ ವಿನುತಾಳನನ್ನು ಆಕೆಯ ಪತಿ ನರೇಂದ್ರ ಬಾಬು, ಇನ್ನಿತರು ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತಳ ತಾಯಿ ಮುನಿಲಕ್ಷ್ಮೀ ಅವರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ವಿನುತಾ ಹಾಗೂ ನರೇಂದ್ರ ಬಾಬು ಅವರ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅನೇಕ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲ್ಲೇರಿದ್ದು, ಕೆಲವೊಂದು ನ್ಯಾಯಾಲಯದ ವಿಚಾರಣಾ ಹಂತದಲ್ಲಿವೆ ಎಂಬ ಮಾಹಿತಿ ಲಭ್ಯವಾಗುತ್ತದೆ. 

ನಂತರ ಪೊಲೀಸರಿಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತಾಂತ್ರಿಕ ಸುಳಿವು ಆಧರಿಸಿ ಮೃತ ವಿನುತಾ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದ ಪ್ರಶಾಂತ್ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಾರೆ. ನಂತರ ಆತನ ಹೇಳಿಕೆಯ ಮೇರೆಗೆ ಮತ್ತೋರ್ವ ಜಗನ್ನಾಥ್ ಎಂಬಾತನನ್ನು ವಶಕ್ಕೆ ಪಡೆಯುತ್ತಾರೆ. ಆಗ ಅವರಿಬ್ಬರೂ ಮೃತಳ ಗಂಡ ನರೇಂದ್ರ ಬಾಬು ತಮಗೆ ಕೊಲೆ ಮಾಡಲು ಸುಪಾರಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಇದೇ ತಿಂಗಳ 20ರಂದು ವಿನುತಾ ಮನೆಯಲ್ಲಿ ಇಲ್ಲದಿರುವ ಸಮಯವನ್ನು ನೋಡಿ, ಆಕೆಯ ಮನೆಯ ಬಾತ್ ರೂಮ್ ನ ಕಿಟಕಿ ಕಟ್ ಮಾಡಿ ಮನೆ ಪ್ರವೇಶಿಸಿ, ಅವಿತುಕೊಂಡಿರುತ್ತಾರೆ. ನಂತರ ಮಧ್ಯಾಹ್ನ ವಿನುತ ಮನೆಗೆ ಬಂದು ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದಾಗ ಪ್ರಶಾಂತ್ ಹಾಗೂ ಜಗನ್ನಾಥ್ ಇಬ್ಬರೂ ಸೇರಿ ಮರದ ದೊಣ್ಣೆಯಿಂದ ಆಕೆಯ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಿನುತಾಳಿಂದ ಕೌಟುಂಬಿಕ ಕಲಹದಿಂದ ಬೇಸತ್ತು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ, ಆಕೆ ಅರ್ಜಿ ಗೆ ತಡೆಯಾಜ್ಞೆ ತಂದು ಹಲವು ದೂರು ದಾಖಲಿಸಿ,‌ ಮಾನಸಿಕವಾಗಿ ಕಿರುಕಿಳ ನೀಡಲು ಆರಂಭಿಸಿದಳು. ಅಲ್ಲದೇ, ತಾವು ಹಿಂದೆ ಇದ್ದ ಮನೆಯನ್ನು ಖಾಲಿ ಮಾಡದೇ, ಸದ್ಯ ಇದ್ದ ಮನೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಡುವಂತೆ ಬೇಡಿಕೆ ಇಟ್ಟಿದ್ದಳು. ಹೀಗಾಗಿ ಮಾನಸಿಕ ಕಿರುಕುಳ ತಾಳಲಾರದೇ, ಆಕೆಯ ಹತ್ಯೆಗೆ ಸುಪಾರಿ ನೀಡಿದ್ದಾಗಿ ಪತಿ ನರೇಂದ್ರ ಬಾಬು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಯಾಲಿಕಾವಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಯೋಗೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಪ್ರಕರಣ ಭೇದಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com