ಬೆಂಗಳೂರು:ನಗರದ ಹೊರವಲಯದ ನೆಲಮಂಗಲ ತಾಲ್ಲೂಕಿನ ಸೊಂದೆಕೊಪ್ಪ ಗ್ರಾಮದಲ್ಲಿರುವ ಬಂಧನ ಕೇಂದ್ರದ ಬಗ್ಗೆ ರಾಜ್ಯ ಗೃಹ ಇಲಾಖೆ ಮೌನ ವಹಿಸಿದ್ದರೆ, ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ಬಾಕಿ ಇರುವ ಸುಮಾರು 14 ಮಂದಿಯನ್ನು ಈ ಬಂಧನ ಕೇಂದ್ರದಲ್ಲಿ ಇರಿಸಲಾಗುತ್ತದೆ ಎಂಬ ಮಾಹಿತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಅದು ಇವರಿಗೆ ಜಾಮೀನು ಸಿಕ್ಕಿದರೆ ಮಾತ್ರ.
ಇಬ್ಬರು ಬಾಂಗ್ಲಾದೇಶಿಯರು, ಮೂವರು ನೈಜೀರಿಯಾ ಪ್ರಜೆಗಳು ಮತ್ತು ಕೆಲ ಸಾಗರೋತ್ತರ ವಿದ್ಯಾರ್ಥಿಗಳು ವಿದೇಶಿಗರ ಕಾಯ್ದೆಯಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಜಾಮೀನು ಸಿಕ್ಕಿದರೆ ನಿಯಮ ಪ್ರಕಾರ ಅವರನ್ನು ಅವರ ದೇಶಗಳಿಗೆ ಗಡೀಪಾರು ಮಾಡಬೇಕಾಗುತ್ತದೆ. ಜನವರಿ ಹೊತ್ತಿಗೆ ಬಂಧನ ಕೇಂದ್ರ ಸಿದ್ದವಾಗುತ್ತದೆ ಎಂದು ಕಳೆದ ಅಕ್ಟೋಬರ್ ನಲ್ಲಿಯೇ ನ್ಯಾಯಾಲಯಕ್ಕೆ ತಿಳಿಸಿದ್ದೆವು. ಜಾಮೀನು ಸಿಕ್ಕವರನ್ನು ಬಂಧನ ಕೇಂದ್ರಕ್ಕೆ ವರ್ಗಾಯಿಸುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ನ್ಯಾಯವಾದಿಯೊಬ್ಬರು ಹೇಳುತ್ತಾರೆ.
ಸುಮಾರು ಅರ್ಧ ಎಕರೆ ಜಾಗದಲ್ಲಿರುವ ಈ ಬಂಧನ ಕೇಂದ್ರದಲ್ಲಿ 5 ಕೋಣೆಗಳಿದ್ದು ಸುಮಾರು 25 ಮಂದಿಯನ್ನು ಇಟ್ಟುಕೊಳ್ಳಬಹುದು. ಈ ಕಾರಣಕ್ಕಾಗಿಯೇ ಅಲ್ಲಿ ಅಡುಗೆ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದೆ ಎಂದರು.
ಕಳೆದ ವರ್ಷ ಕೇಂದ್ರದಿಂದ ಮೋದಿ ಸರ್ಕಾರ ಮಾದರಿ ಬಂಧನ ಕೇಂದ್ರಗಳ ಬಗ್ಗೆ ಕರ್ನಾಟಕಕ್ಕೆ ಮತ್ತು ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ್ದು ಅದನ್ನು ಅನುಷ್ಠಾನಗೊಳಿಸುವಂತೆ ಹೇಳಿದೆ. ಆ ಮಾದರಿಯಂತೆ ನೆಲಮಂಗಲದಲ್ಲಿ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕೇಂದ್ರ ಸರ್ಕಾರದ ಕೈಪಿಡಿಯಲ್ಲಿ, ನಕಲಿ ದಾಖಲೆಗಳೊಂದಿಗೆ ಭಾರತದೊಳಗೆ ಪ್ರವೇಶಿಸಿದ ಅಕ್ರಮ ವಲಸಿಗರು ಮತ್ತು ನ್ಯಾಯಾಧೀಕರಣದಿಂದ ವಿದೇಶಿಗರು ಎಂದು ಘೋಷಿಸಲ್ಪಟ್ಟವರು ಗಡೀಪಾರಿಗೆ ಕಾಯುತ್ತಿದ್ದಾರೆ. ಕೇಂದ್ರ ಅವರಿಗೆ ವೈದ್ಯಕೀಯ ಸೇವೆ ನೀಡಲಿದೆ. ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ರಾಜ್ಯಗಳಿಗೆ ಗರಿಷ್ಠ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದರು.
ಬಂಧನ ಕೇಂದ್ರದ ಹೊರಗೆ ಹೂದೋಟ ನಿರ್ಮಿಸಲಾಗಿದ್ದು ಬಂಧಿತರ ಕಾವಲಿಗೆ ಐವರು ಪೊಲೀಸರನ್ನು ಕೂಡ ನಿಯೋಜಿಸಲಾಗುತ್ತದೆ.
Advertisement