ಬೆಂಗಳೂರು: ಚಿನ್ನಾಭರಣಗಳಿಗೆ ಪಾಲೀಶ್ ಹಾಕುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ನಗರದ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಂಜಪ್ಪ ಲೇಔಟ್ ನಲ್ಲಿ ನಡೆದಿದೆ.
ಸರಸ್ವತಿ ವಂಚನೆಗೊಳಗಾದ ಮಹಿಳೆ, ಡಿಸೆಂಬರ್ 24 ರಂದು ಮನೆಗೆ ಬಂದ 35-40 ವರ್ಷದ ಇಬ್ಬರು ಪುರುಷರು, ತಾವು ಕಂಪನಿಯೊಂದರ ಉದ್ಯೋಗಿಗಳಾಗಿದ್ದು, ತಮ್ಮ ಕಂಪನಿ ಚಿನ್ನಕ್ಕೆ ಪಾಲಿಷ್ ಹಾಕುವ ಪೌಡರ್ ತಯಾರು ಮಾಡುತ್ತಿರುವುದಾಗಿಯೂ, ಅದನ್ನು ತವು ಮಾರ್ಕೆಟಿಂಗ್ ಮಾಡಲು ಬಂದಿರುವುದಾಗಿ ಪರಿಚಯಿಸಿಕೊಂಡಿದ್ದಾರೆ.
ಜೊತೆಗೆ ಹೇಗೆ ಪಾಲೀಶ್ ಮಾಡಬೇಕು ಎಂಬುದರ ಬಗ್ಗೆ ಪ್ರದರ್ಶಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪಿದ ಸರಸ್ವತಿ ತಮ್ಮ ಮಾಂಗಲ್ಯಸರ ಹಾಗೂ 2 ಉಂಗುರ ನೀಡಿದ್ದಾರೆ. ನಂತರ ಒಂದು ಕುಕ್ಕರ್ ಹಾಗೂ ಅರಿಶಿನ ಪುಡಿ ನೀಡುವಂತೆ ಕೇಳಿದ್ದಾರೆ, ಅದರಲ್ಲೆ ಕಲ್ಲು ಮತ್ತು ಮಾಂಗಲ್ಯಸರ ಹಾಗೂ ಅರಿಶಿನ ಪುಡಿಹಾಕಿದ್ದಾರೆ. ನಂತರ ಕುಕ್ಕರ್ ಮುಚ್ಚಳ ತೊಳೆದುಕೊಂಡು ಬರುವಂತೆ ಹೇಳಿದ್ದಾರೆ. ಸರಸ್ವತಿ ಮುಚ್ಚಳ ತೊಳೆದು ಕೊಂಡು ಬಂದಿದ್ದಾರೆ, ಅದನ್ನು ಮುಚ್ಚಿ 10 ನಿಮಿಷ ಕುದಿಸುವಂತೆ ಹೇಳಿ, ವಾಪಸ್ ಬರುವುದಾಗಿ ಹೇಳಿ ಹೊರಟಿದ್ದಾರೆ. ಎಷ್ಟೇ ಹೊತ್ತಾದರೂ ಅವರು ವಾಪಸ್ ಬಾರದಿರುವಾಗ ಸರಸ್ವತಿ ಕುಕ್ಕರ್ ಮುಚ್ಚಳ ತೆರೆದಿದ್ದಾರೆ,
ಕುಕ್ಕರ್ ಮುಚ್ಚಳ ತೆರೆದ ಸರಸ್ವತಿ ಅವರಿಗೆ ಆಘಾತ ಕಾದಿತ್ತು. ಕುಕ್ಕರ್ ನಲ್ಲಿ ಕೇವಲ ಕಲ್ಲುಗಳು ಮಾತ್ರ ಇದ್ದವು, ಮಾಂಗಲ್ಯ ಸರ ಮತ್ತು ಉಂಗುರಗಳು ಉರಲಿಲ್ಲ, ಸರಸ್ವತಿ ಅವರು ಎರಡೂವರೆ ಲಕ್ಷ ಮಾಲ್ಯದ ಚಿನ್ನಾಭರಣ ಕಳೆದು ಕೊಂಡಿದ್ದಾರೆ. ನಂತರ ಸರಸ್ವತಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement