ಹಂಪಿ ಉತ್ಸವಕ್ಕೆ ದಿನಗಣನೆ ಆರಂಭ: ಭರದಿಂದ ಸಾಗಿದ ಸಿದ್ಧತೆ, ವಿದ್ಯುತ್ ದೀಪಾಲಂಕಾರ ಕಾರ್ಯ ಬಹುತೇಕ ಅಂತ್ಯ

ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಹಂಪಿಯ ಮನಮೋಹಕ ಸ್ಮಾರಕಗಳು ರಾತ್ರಿವೇಳೆಯಲ್ಲೂ ಜಗಮಗಿಸುವಂತೆ ಮಾಡುವ ಕಾಮಗಾರಿ ಬಹುತೇಕ ಅಂತ್ಯಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಹಂಪಿಯ ಮನಮೋಹಕ ಸ್ಮಾರಕಗಳು ರಾತ್ರಿವೇಳೆಯಲ್ಲೂ ಜಗಮಗಿಸುವಂತೆ ಮಾಡುವ ಕಾಮಗಾರಿ ಬಹುತೇಕ ಅಂತ್ಯಗೊಂಡಿದೆ. 

ಹಂಪಿ ಉತ್ಸವ ಜನವರಿ 10 ಮತ್ತು 11 ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಉತ್ಸವಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. 

ವೀರೂಪಾಕ್ಷೇಶ್ವರ ಸ್ವಾಮಿ ದೇಗುಲದ ಎದುರಿಗೆ ಇರುವ ಎದುರು ಬಸವಣ್ಣ ಮಂಟಪ, ಚಕ್ರತೀರ್ಥ, ಪ್ರಸನ್ನ ನರಸಿಂಹ ದೇವಸ್ಥಾನ, ರಾಜರ ತುಲಾಭಾರ ಬಳಿ ಧ್ವನಿ ಮತ್ತು ಬೆಳಕು ವ್ಯವಸ್ಥೆಗೊಳಿಸಲಾಗಿದ್ದು, ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ, ಮಾತಂಗ ಪರ್ವತ, ಚಕ್ರತೀರ್ಥ, ವರಾಹ ದೇವಸ್ಥಾನ, ಸುಗ್ರೀವನ ಗುಹೆ, ಪುರಾತನ ಬ್ರಿಡ್ಜ್, ಪುರಾತನ ಬಾವಿ, ರಾಜರ ತುಲಾಭಾರ, ಕುದುಗೊಂಬೆ ಮಂಟಪ, ಕೋಟಿ ಲಿಂಗ, ಗೆಜ್ಜಲ ಮಂಟಪ, ಅಚ್ಚುತರಾಯ ಬಜಾರ್, ನರಸಿಂಹ ದೇವಸ್ಥಾನ, ಗಂದಮಾದನ ಪರ್ವತ ಸೇರಿದಂತೆ ಕೆಲ ಸ್ಮಾರಕಗಲಿಗೆ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಧ್ವನಿ ಬೆಳಕಿಗೆ ಒಳಪಡುವ ಸ್ಮಾರಕಗಳಿಗೆ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಅಳವಡಿಕೆಯ ಕಾರ್ಯ ಮುಗಿದಿದ್ದು, ಅಂತಿಮವಾಗಿ ಟೆಸ್ಟಿಂಗ್ ಕಾರ್ಯಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಹಂಪಿ ಬೈನೈಟ್ ಯೋಜನೆಯಲ್ಲಿ ಹಂಪಿಯಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಸಲು ಸಿದ್ಧವಾಗುತ್ತಿದೆ. 

ಹೊಸ ವರ್ಷಕ್ಕೆ ಸಿದ್ದತೆಗಳೂ ನಡೆಯುತ್ತಿದ್ದು, ಹೊಸವರ್ಷಕ್ಕೂ ಮುನ್ನ ಕೆಲ ಕಾಮಗಾರಿಗಳು ಪೂರ್ಣಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೂ, ಉತ್ಸವ ಯಶಸ್ವಿಯಾಗಲಿದೆ ಎಂದು ಸ್ಥಳೀಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಉತ್ಸವದ ಲೋಗೋವನ್ನು ಬಿಡುಗಡೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿಯೇ ಲೋಗೋವನ್ನು ಬಿಡುಗಡೆ ಮಾಡಲಾಗುತ್ತದೆ. ಬೆಳಕು ಹಾಗೂ ಧ್ವನಿ ಅಳವಡಿಗೆ ಉತ್ಸವದ ಪ್ರಮುಖ ಆಕರ್ಷಕವಾಗಿರಲಿದೆ. ಕ್ವೀನ್ಸ್ ಗಾರ್ಡನ್ ಬಳಿ ಉದ್ಯಾನವನ ಬರಲಿದೆ. ಇದರ ಕಾರ್ಯ ಬಹುತೇಕ ಅಂತಿಮ ಘಟ್ಟದಲ್ಲಿದೆ. ಉತ್ಸವದ ವೇಳೆಗೆ ಉದ್ಯಾನವನ್ನು ಸಿಎಂ ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. 

ಉತ್ಸವಕ್ಕೆ ನವೆಂಬರ್ ತಿಂಗಳು ಉತ್ತಮವಾಗಿದೆ. ಈ ಹಿಂದೆ ಉತ್ಸವವನ್ನು ಮೂರು ದಿನಗಳ ಕಾಲ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಎರಡು ದಿನಕ್ಕೆ ಇಳಿಸಲಾಗಿದೆ. ಅಲ್ಲದೆ, ಉತ್ಸವಕ್ಕೆ ನೀಡಲಾಗುತ್ತಿದ್ದ ಅನುದಾನವನ್ನೂ ಕೂಡ ಕಡಿತಗೊಳಿಸಲಾಗಿದೆ. ಸರ್ಕಾರ ಉತ್ಸವನ್ನು ವಾರ್ಷಿಕ ಹಬ್ಬವನ್ನಾಗಿ ಮಾಡಬೇಕು. ಪ್ರತೀವರ್ಷ ಉತ್ಸವವನ್ನು ನಡೆಸಬೇಕೆಂದು ವ್ಯಾಪಾರಿ ನಾಗರಾಜ್ ಎಂಬುವವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com