ರಾಜ್ಯ
ಹುಬ್ಬಳ್ಳಿ: ಪದ್ಮಶ್ರೀ ಪ್ರಶಸ್ತಿ ವಿಜೇತ ವೈದ್ಯ ಆರ್.ಬಿ.ಪಾಟೀಲ್ ಇನ್ನಿಲ್ಲ
ಖ್ಯಾತ ವೈದ್ಯ, ಉತ್ತರ ಕರ್ನಾಟಕದ ಪ್ರಥಮ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ.ಆರ್.ಬಿ.ಪಾಟೀಲ್ (93) ಶನಿವಾರ ಹುಬ್ಬಳ್ಳಿಯಲ್ಲಿ ನಿಧನರಾದರು.
ಹುಬ್ಬಳ್ಳಿ: ಖ್ಯಾತ ವೈದ್ಯ, ಉತ್ತರ ಕರ್ನಾಟಕದ ಪ್ರಥಮ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ.ಆರ್.ಬಿ.ಪಾಟೀಲ್ (93) ಶನಿವಾರ ಹುಬ್ಬಳ್ಳಿಯಲ್ಲಿ ನಿಧನರಾದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಆರ್.ಬಿ. ಪಾಟೀಲ್ ಕಳೆದ ಹಲವು ದಿನಗಳಿಂದ ಮೆದುಳು ರಕ್ತಸ್ರಾವ ಕ್ಕೆ ಈಡಾಗಿದ್ದರು.
ವಿಜಯಪುರ ಜಿಲ್ಲೆ ಕೌಲಗಿ ಗ್ರಾಮದವರಾದ ಪಾಟೀಲ್ ಮುಂಬೈನಲ್ಲಿ 1951ರಂಲ್ಲಿ ಎಂಬಿಬಿಎಸ್, 1956ರಲ್ಲಿ ಇಂಗ್ಲೆಂಡ್ನಲ್ಲಿ ಎಫ್ಆರ್ಸಿಎಸ್ ಪದವಿ ಪಡೆದಿದ್ದರು.
1957ರಿಂದ 1970ರವರೆಗೆ ಹುಬ್ಬಳ್ಳಿ ಕೊಅಪರೇಟಿವ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು ಈ ಸಮಯದಲ್ಲಿ 25 ಸಾವಿರಕ್ಕೂಹೆಚು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿ ವೈದ್ಯರೆನಿಸಿಕೊಂಡಿದ್ದರು.ಹುಬ್ಬಳ್ಳಿ ಕಿಮ್ಸ್ ನಲ್ಲಿ 14 ವರ್ಷ ಶಸ್ತ್ರಚಿಕಿತ್ಸೆ ವಿಭಾಗದ ಶಿಕ್ಷಕರಾಗಿ ಬೇರೆ ಬೇರೆ ವಿವಿಗಳ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷಕರಾಗಿ ಸಹ ಪಾಟೀಲ್ ಕಾರ್ಯನಿರ್ವಹಿಸಿದ್ದರು
1970ರಲ್ಲಿ 100 ಹಾಸಿಗೆಗಳ ಮಲ್ಟಿಸ್ಪೆಶಾಲಟಿ ಆಸ್ಪತ್ರೆ ಪ್ರಾರಂಭಿಸಿದ ಇವರು ಉತ್ತರ ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರ, ಆಂಧ್ರ ಮತ್ತು ಗೋವಾ ಪ್ರಾಂತ್ಯದವರಿಗೆ ಕ್ಯಾನ್ಸರ್ ಆಸ್ಪತ್ರೆ ಬೇಕೆನ್ನುವುದನ್ನು ಮನಗಂಡು 1975ರಲ್ಲಿ ಹುಬ್ಬಳ್ಳಿಯ ನವನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋದನಾ ಕೇಂದ್ರ ಸ್ಥಾಪನೆ ಮಾಡಿದ್ದರು.ಕಾಲಾನಂತರದಲ್ಲಿ ಇದುವೇ ಆರ್.ಬಿ.ಪಾಟೀಲ್ ಕ್ಯಾನ್ಸರ್ ಆಸ್ಪತ್ರೆ ಎಂದು ಹೆಸರಾಯಿತು.
ರಾಜ್ಯ ಕುಟುಂಬ ಯೋಜನೆ ಮಂಡಳಿ ಸದಸ್ಯರಾಗಿ, ವೈದ್ಯಕೀಯ ಸಂಘಟನೆಗಳ, ವಿವಿಧ ಆಸ್ಪತ್ರೆಗಳ, ಸಾಮಾಜಿಕ ಸೇವಾ ಸಂಘಟನೆಗಳ ನಿರ್ದೇಶಕರು ಹಾಗೂ ಪದಾಧಿಕಾರಿ ಹೀಗೆ ನಾನಾ ಹುದ್ದೆ, ಸ್ಥಾನಮಾನಗಳನ್ನು ಪಡೆದು ಯಶಸ್ವಿಯಾಗಿದ್ದರು. ಇವರ ಸಾಧನೆ ಗುರುತಿಸಿ ಹಲವು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಿದ್ದು 969ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಸಮ್ಮಾನಿಸಿದೆ. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಸೈನ್ಸ್ ಅವಾರ್ಡ್ನೀಡಿ ಪುರಸ್ಕರಿಸಿತ್ತು.
ಪಾಟೀಲರು ಡಾ. ಬಿ.ಆರ್.ಪಾಟೀಲ್, ಡಾ. ಸರೋಜಾ, ಡಾ. ಶೈಲಾ ಎಂಬ ಮೂವರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಭಾನುವಾರ ಬೆಳಿಗ್ಗೆ ಅವರ ಸ್ವಗ್ರಾಮ ವಿಜಯಪುರ ಜಿಲ್ಲೆ ಕೌಲಗಿ ಗ್ರಾಮದಲ್ಲೇ ನಡೆಯಲಿದೆ ಎಂದು ಮೂಲಗಳು ಹೇಳಿದೆ.