ಗದಗ: ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನ, ಪ್ರಾಮಾಣಿಕ ಹಾಗೂ ಪತ್ತೆದಾರಿಕೆಯಲ್ಲಿ ನುರಿತಿದ್ದ ಪೋಲೀಸ್ ಶ್ವಾನ "ರಮ್ಯಾ" ನಿಧನವಾಗಿದೆ. ಗದಗ ಅಪರಾಧ ದಳದ ಶ್ವಾನ "ರಮ್ಯಾ ಹಲವು ದರೋಡೆ ಪ್ರಕರಣ, ಕೊಲೆ ಪ್ರಕರಣ ಬೇಧಿಸಲು ಪೋಲೀಸರಿಗೆ ಸಹಕಾರ ನೀಡಿತ್ತು. ರಮ್ಯ ಸಾವಿನಿಂದ ಪೋಲೀಸ್ ಅಧಿಕಾರಿಗಳು ದುಃಖಿತರಾಗಿದ್ದಾರೆ.
10 ದಿನಗಳಿಂದ ಗರ್ಭಕೋಶ ಕಾಯಿಲೆಯಿಂದ ಬಳುತ್ತಿದ್ದ ರಮ್ಯಾ ಸೋಮವಾರ ಅಸುನೀಗಿದೆ. ರಮ್ಯಾ ಇದುವರೆಗೆ 120 ರಿಂದ 130 ಪ್ರಕರಣಗಳಲ್ಲಿ ಭೇದಿಸಲು ಸಹಾಯ ಮಾಡಿತ್ತು.
ಡಾಬರ್ ಮನ್ ಜಾತಿಯ 11 ವರ್ಷದ ರಮ್ಯಾ ಒಂದು ದಶಕದಿಂದಲೂ ಗದಗ ಜಿಲ್ಲಾ ಪೋಲೀಸಿಲಾಖೆಯಲ್ಲಿ ಪ್ರಮುಖ ಪತ್ತೇದಾರಿ ಶ್ವಾನವಾಗಿತ್ತು.ಬೆಂಗಳೂರು ಆಡುಗೋಡಿಯಲ್ಲಿರುವ ಪೋಲೀಸ್ ಶ್ವಾನ ತರಬೇತಿ ಕೇಂದ್ರದಲ್ಲಿ ತರಬೇತಿ ಹೊಂದಿದ್ದ ರಮ್ಯಾ 2009 ಅಕ್ಟೋಬರ್ 13ರಿಂದ ಇಲಾಖೆಗೆ ಸೇರಿಕೊಂಡಿತ್ತು.
ರಮ್ಯಾ ತನ್ನ ಚತುರ ಬುದ್ದಿವಂತಿಕೆಯ ಕಾರಣ ಪೋಲೀಸ್ ಅಧಿಕಾರಿಗಳ ಮೆಚ್ಚುಗೆ ಗಳಿಸಿದ್ದು ಶ್ವಾನ ಆನಾರೋಗ್ಯಕ್ಕೆ ಒಳಗಾದ ವೇಳೆಮುನ್ನೆಚ್ಚರಿಕೆಯಾಗಿ ಪೋಲೀಸರು ಶಸ್ತ್ರಚಿಕಿತ್ಸೆ ಸಹ ಕೊಡಿಸಿದ್ದರು.
ಸಾಮಾನ್ಯವಾಗಿ ಪೋಲೀಸ್ ಇಲಾಖೆಯಲ್ಲಿ ಹತ್ತು ವರ್ಷಗಳು ಸೇವೆ ಸಲ್ಲಿಸಿದ ಶ್ವಾನಗಳಿಗೆ ನಿವೃತ್ತಿ ಘೋಷಿಸಲಾಗುತ್ತದೆ. ಆದರೆ ರಮ್ಯಾ ಬುದ್ದಿವಂತಿಕೆ, ಕಾರ್ಯಕ್ಷಮತೆಯ ನೆಪದಿಂದ ಶ್ವಾನದ ಸೇವಾವಧಿಯನ್ನು ಒಂದು ವರ್ಷ ಕಾಲ ವಿಸ್ತರಿಸಲಾಗಿತ್ತು.
ಸರ್ಕಾರಿ ಗೌರವ
ಪೋಲೀಸ್ ಇಲಾಖೆಯಲ್ಲಿ ಪೋಲೀಸ್ ಅಧಿಕಾರಿಗಳಂತೆಯೇ ಪೋಲೀಸ್ ಶ್ವಾನದ ಬಗೆಗೆ ಸಹ ಅಧಿಕಾರಿಯ ಸ್ಥಾನಮಾನ ಕಲ್ಪಿಸಲಾಗುತ್ತದೆ. ಇದೇ ಕಾರಣ ಮೃತ ಶ್ವಾನಕ್ಕೆ ಸಹ ಸರ್ಕಾರಿ ಗೌರವ ಸಲ್ಲಿಕೆಯಾಗಿದ್ದು ಶ್ವಾನದ ಅಂತಿಮ ದರ್ಶನಕ್ಕೆ ಜಿಲ್ಲಾ ಸಶಸ್ತ್ರ ಪಡೆ ಹಳೆ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಳಿಕ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವಗಳೊಡನೆ ಮೈದಾನದ ಮೂಲೆಯಲ್ಲಿರುವ ತೆಂಗಿನ ಮರವೊಂದರ ಬುಡದಲ್ಲಿ ಮಣ್ಣು ಮಾಡಲಾಯಿತು.ಅಂತ್ಯಸಂಸ್ಕಾರದಲ್ಲಿ ಡಿವೈಎಸ್ಪಿ ವಿಜಯಕುಮಾರ್, ಸಿಪಿಐ ವೆಂಕಟೇಶ ಯಡಹಳ್ಳಿ ಸೇರಿ ಹಲವು ಪೋಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.