ಬೆಂಗಳೂರು: ಕಳೆದ ಫೆಬ್ರವರಿ 1ರಂದು ನಗರದಲ್ಲಿ ಪತನಗೊಂಡಿದ್ದ ಮಿರೇಜ್-2000 ತರಬೇತಿ ಯುದ್ಧ ವಿಮಾನದ ಕಪ್ಪು ಪೆಟ್ಟಿಗೆಯನ್ನು ದಾಖಲೆಗಳನ್ನು ಪರಿಶೀಲಿಸಲು ಫ್ರಾನ್ಸ್ ಗೆ ಕೊಂಡೊಯ್ಯಲಾಗುತ್ತಿದೆ. ಇಬ್ಬರು ಪೈಲಟ್ ಗಳ ಸಾವಿಗೆ ಕಾರಣವಾದ ವಿಮಾನ ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆಹಾಕಲು ಅಪಘಾತದ ತನಿಖೆ ನಡೆಸುತ್ತಿರುವ ಭಾರತೀಯ ವಾಯುಪಡೆ ಕಪ್ಪು ಪೆಟ್ಟಿಗೆಯನ್ನು ಫ್ರಾನ್ಸ್ ಗೆ ಕಳುಹಿಸುತ್ತಿದೆ.
ಕಪ್ಪು ಪೆಟ್ಟಿಗೆಗೆ ಸಹ ಸ್ವಲ್ಪ ಹಾನಿಯಾಗಿರುವುದರಿಂದ ಅದನ್ನು ಜಾಗರೂಕತೆಯಿಂದ ಭಾರತೀಯ ವಾಯುಪಡೆ ಫ್ರಾನ್ಸ್ ಗೆ ಕಳುಹಿಸಲಿದೆ. ವಿಮಾನ ಅಪಘಾತಕ್ಕೆ ನಿಖರ ಕಾರಣವೇನೆಂದು ಈ ಕಪ್ಪು ಪೆಟ್ಟಿಗೆಯಿಂದ ತಿಳಿದುಬರಲಿದೆ. ಇದಕ್ಕಾಗಿ ಫ್ರಾನ್ಸ್ ಗೆ ಭಾರತೀಯ ವಾಯುಸೇನೆಯ ಅಧಿಕಾರಿಯೊಬ್ಬರು ಸಹ ತೆರಳಲಿದ್ದಾರೆ.
ಭಾರತೀಯ ವಾಯುಪಡೆ ಮತ್ತು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ನ ಅಧಿಕಾರಿಗಳ ಸಮ್ಮುಖದಲ್ಲಿ ಫ್ರಾನ್ಸ್ ನ ಸಂಸ್ಥೆಗಳು ಕಪ್ಪು ಪೆಟ್ಟಿಗೆಯ ತನಿಖೆ ನಡೆಸಲಿದ್ದಾರೆ. ಈ ಮಧ್ಯೆ ಭಾರತೀಯ ವಾಯುಪಡೆ ರಾಷ್ಟ್ರೀಯ ವಿಮಾನ ತನಿಖೆ ಕೇಂದ್ರ, ಏರ್ ವೈಸ್ ಮಾರ್ಷಲ್ ತಿವಾರಿಯವರನ್ನು ನೇಮಿಸಿ ಹೆಚ್ ಎಎಲ್ ಜೊತೆ ಸೇರಿ ನ್ಯಾಯಾಲಯದಲ್ಲಿ ಘಟನೆ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅಪಘಾತದ ಬಗ್ಗೆ ನಿಖರ ಮಾಹಿತಿ ನೀಡಬೇಕೆಂದು ಮೃತ ಪೈಲಟ್ ಗಳಾದ ಸ್ಕ್ವಾಡ್ರನ್ ಸಮೀರ್ ಅಬ್ರೊಲ್ ಮತ್ತು ಸಿದ್ಧಾರ್ಥ್ ನೇಗಿ ಒತ್ತಾಯಿಸುತ್ತಿರುವುದರ ಮಧ್ಯೆ ಭಾರತೀಯ ವಾಯುಪಡೆ ಈ ನಿರ್ಧಾರ ಕೈಗೊಂಡಿದೆ. ಭಾರತೀಯ ವಾಯುಪಡೆ ಹಳೆ ಯಂತ್ರಗಳನ್ನು ಬಳಸುತ್ತಿದೆ ಎಂದು ಸಮೀರ್ ಅವರ ಪತ್ನಿ ಗರಿಮ ಅಬ್ರೊಲ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಆರೋಪಿಸಿದ್ದಾರೆ.
ಅಬ್ರೊಲ್ ಮತ್ತು ನೆಗಿ ಅವರ ಪೋಷಕರು ಘಟನೆ ಬಗ್ಗೆ ತನಿಖೆ ನಡೆಸುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಮನವಿ ಮಾಡಿದ್ದಾರೆ.
Advertisement