ವಾಯುಭಾರ ಕುಸಿತದಿಂದ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಬೆಂಗಳೂರಿನೆಲ್ಲೆಡೆ ಮಳೆ ಸುರಿದಿದ್ದು, ಎರಡು ಕಡೆ ಮರದ ಕೊಂಬೆಗಳು ಮುರಿದುಬಿದ್ದಿವೆ. ನಿಮ್ಹಾನ್ಸ್ ಬಳಿ ರಸ್ತೆಗೆ ಬಿದ್ದ ಮರದ ಕೊಂಬೆಯನ್ನು ಕೂಡಲೇ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ರಾಜಾಜಿನಗರ ಎಂ ಇ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಮರದ ಕೊಂಬೆ ರಸ್ತೆಗೆ ಬಿದ್ದಿತ್ತು, ಅದನ್ನೂ ಕೂಡಲೇ ತೆರವುಕೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನು ಹೊರತುಪಡಿಸಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಯಾವುದೇ ಅವಘಡಗಳಾದರೂ ಕೂಡಲೇ ಸ್ಪಂದಿಸುವಂತೆ ಬಿಬಿಎಂಪಿ ಅಧಿಕಾರಿ ಮತ್ತು ಸಿಬ್ಬಂದಿಗೆ ಮೇಯರ್ ಮತ್ತು ಕಮಿಷನರ್ ಆದೇಶಿಸಿದ್ದಾರೆ.