ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವನ್ನು ವಿಭಜಿಸುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಜೆಟ್ ನಲ್ಲಿ ಘೋಷಣೆ ಮಾಡಿದ ನಂತರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವನ್ನು ಉಳಿಸಿ ಎಂಬ ಹ್ಯಾಷ್ ಟ್ಯಾಗನ್ನು ಆರಂಭಿಸಿದ್ದಾರೆ.
ಹಾಸನದಲ್ಲಿ ಹೊಸ ವಿಟಿಯು ಸ್ಥಾಪನೆ ಮಾಡಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿದ್ದಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದು ಮೊದಲಿಗೆ ವಿದ್ಯಾಲಯದ ಭ್ರಷ್ಟಾಚಾರ ಆರೋಪಗಳನ್ನು ಬಗೆಹರಿಸಿ, ವಿಶ್ವವಿದ್ಯಾಲಯವನ್ನು ಬೆಳೆಸುವುದಕ್ಕೆ ಗಮನಹರಿಸಿ ಎಂದು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಒತ್ತಾಯಿಸಿದ್ದಾರೆ.
ತಾಂತ್ರಿಕ ಶಿಕ್ಷಣಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲು ರಾಜ್ಯ ಸರ್ಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಸ್ಥಾಪಿಸಿದ್ದು ಅದರಡಿ 218 ಕಾಲೇಜುಗಳು, ಒಂದು ಘಟಕ ಮತ್ತು 17 ಸ್ವಾಯತ್ತ ಕಾಲೇಜುಗಳಿವೆ. ಇದೀಗ ವಿಶ್ವವಿದ್ಯಾಲಯವನ್ನು ವಿಭಜಿಸುವುದಾಗಿ ಮುಖ್ಯಮಂತ್ರಿ ನಿರ್ಧರಿಸಿರುವುದು ಉತ್ತರ ಕರ್ನಾಟಕ ಜನರನ್ನು ಆಘಾತಕ್ಕೀಡುಮಾಡಿದೆ.
ಟ್ವಿಟ್ಟರ್ ನಲ್ಲಿ ನೆಟಿಜನ್ ಗಳು ಸೇವ್ ವಿಟಿಯು ಎಂಬ ಹ್ಯಾಶ್ ಟಾಗ್ ನೊಂದಿಗೆ ಆನ್ ಲೈನ್ ಪ್ರಚಾರ ಆರಂಭಿಸಿದ್ದಾರೆ. ಅನೇಕ ಸಂಘ-ಸಂಸ್ಥೆಗಳು, ವ್ಯಕ್ತಿಗಳು, ಬೆಳಗಾವಿಯ ಪ್ರಮುಖ ನಾಯಕರು, ಸಂಸದ ಸುರೇಶ್ ಅಂಗಡಿ ಪ್ರಚಾರ ಆರಂಭಿಸಿದ್ದಾರೆ.
ಬೆಳಗಾವಿ ಜಿಲ್ಲಾ ಕನ್ನಡ ಸಂಘ ಕಾರ್ಯಸಮಿತಿ ಮುಖ್ಯಮಂತ್ರಿಗಳ ನಿರ್ಧಾರವನ್ನು ಖಂಡಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಇಮೇಲ್ ಕಳುಹಿಸಿದ್ದು ಅದರಲ್ಲಿ ಸರ್ಕಾರದ ಈ ನಿರ್ಧಾರ ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
Advertisement