ಉಡುಪಿ: ವಿಚ್ಛೇದನ ಹತ್ತಿಕ್ಕಲು ಕಾಲೇಜು ವಿದ್ಯಾರ್ಥಿಗಳಿಗೆ ವಿವಾಹ ಪೂರ್ವ ಕೌನ್ಸೆಲಿಂಗ್

ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಉಡುಪಿ ಮೂಲದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಉಡುಪಿ: ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಉಡುಪಿ ಮೂಲದ ಪ್ರದೀಪ್ ಮತ್ತು ರಂಜಿತ(ಹೆಸರು ಬದಲಿಸಲಾಗಿದೆ) ಜೀವನದಲ್ಲಿ ದೂರವಾಗಲು ನಿರ್ಧರಿಸಿದ್ದರು. 
ಹಿರಿಯರು ನೋಡಿ ನಿರ್ಧರಿಸಿದ ಮದುವೆಯಾದರೂ ಅದು ಸಹಾಯವಾಗಲಿಲ್ಲ. ಇಲ್ಲಿ ರಂಜಿತಾಗೆ ಅಗತ್ಯಕ್ಕಿಂತ ಹೆಚ್ಚು ಬಾರಿ ಮೊಬೈಲ್ ಬಳಸುವ ಅಭ್ಯಾಸವಾದರೆ ಅದನ್ನು ಬಿಡಿಸುವುದು ಹೇಗೆ ಎಂದು ಪ್ರದೀಪ್ ಗೆ ಗೊತ್ತಾಗಲಿಲ್ಲ. ಮದುವೆಗೆ ಮುಂಚೆ ಮೃದುವಾಗಿ ಮಾತನಾಡುತ್ತಿದ್ದ ಪತಿಯ ವರ್ತನೆ ಮದುವೆ ಬಳಿಕ ಬದಲಾದದ್ದು ನೋಡಿ ರಂಜಿತಾಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದುವೇ ಇಬ್ಬರ ನಡುವೆ ಸಂಬಂಧ ಬಿರುಕುಬಿಡಲು ಕಾರಣವಾಯಿತು.
ಮದುವೆಯಾದ ನಂತರ ಏನಾಗುತ್ತಿದೆ, ಸಂಬಂಧವನ್ನು ಹೇಗೆ ಸುಧಾರಿಸಿಕೊಂಡು ಅನ್ಯೋನ್ಯವಾಗಿರಬಹುದು ಎಂದು ಮನಃಶಾಸ್ತ್ರಜ್ಞರು ನೀಡಿದ್ದ ಕೌನ್ಸೆಲಿಂಗ್ ದಂಪತಿಗೆ ಸಹಾಯವಾಗಲಿಲ್ಲ. ಹೀಗಾಗಿ ಇಬ್ಬರೂ ವಿಚ್ಛೇದನಕ್ಕೆ ಮುಂದಾದರು.ಇಬ್ಬರೂ ಅಡ್ವೊಕೇಟನ್ನು ಸಂಪರ್ಕಿಸಿದರು.
ಇದು ಕೇವಲ ಪ್ರದೀಪ್-ರಂಜಿತಾ ಸಮಸ್ಯೆಯಲ್ಲ. ಜಿಲ್ಲೆಯಲ್ಲಿ ಇತ್ತೀಚೆಗೆ ಇಂತಹ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಪೋಷಕರು ತಮ್ಮ ಮಕ್ಕಳ ವೈವಾಹಿಕ ಜೀವನ ಕಾಪಾಡಲು ಹೆಣಗುತ್ತಿದ್ದಾರೆ. ಇಂದಿನ ಯುವಜನಾಂಗ ಮದುವೆಯ ಪಾತಿವ್ರತೆಯನ್ನು ಅರ್ಥ ಮಾಡಿಕೊಳ್ಳಲು ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲೆಯಲ್ಲಿರುವ ಸರ್ಕಾರಿ ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮದುವೆ ಪೂರ್ವ ಕೌನ್ಸೆಲಿಂಗ್ ನೀಡಲು ನಿರ್ಧರಿಸಿದೆ.
ಇದರ ಪ್ರಕಾರ, ಅಧಿಕಾರಿಗಳು ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಸಮಾಲೋಚನೆ ನಡೆಸಲಿದ್ದಾರೆ. ಇದರ ಪರಿಣಾಮ ಸಕಾರಾತ್ಮಕವಾಗಿ ಮೂಡಲು ಪ್ರತಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಕೌನ್ಸೆಲಿಂಗ್ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕಳೆದ ವರ್ಷ ಜೂನ್ ನಿಂದ ಅಕ್ಟೋಬರ್ ವರೆಗೆ ಮೂರು ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 108 ಗೃಹ ಹಿಂಸೆ ಕೇಸುಗಳು ದಾಖಲಾಗಿವೆ. ಹೀಗಾಗಿ ಇಲಾಖೆ ಮದುವೆ ಪೂರ್ವ ಕೌನ್ಸೆಲಿಂಗ್ ನಡೆಸಲು ಮುಂದಾಗಿದೆ. ಆರು ಇಲಾಖೆಗಳ ಸಿಬ್ಬಂದಿ, ಕಾನೂನು ತಜ್ಞರು ಮತ್ತು ಸಖಿ ಒನ್ ಸ್ಟಾಪ್ ಕೇಂದ್ರದ ಕೌನ್ಸೆಲರ್ ಗಳು ಮುಂದಿನ ದಿನಗಳಲ್ಲಿ ಕಾಲೇಜಿಗೆ ಭೇಟಿ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com