ರಾಜ್ಯದಲ್ಲಿ ಮುಖ್ಯಮಂತ್ರಿಗಳು ರಾತ್ರಿಯೆಲ್ಲಾ ಅಳುತ್ತಾರೆ, ನಾಮ್ ಧಾರಿಗಳು ದೆಹಲಿಯಲ್ಲಿ ಅಳುತ್ತಾರೆ, ಆದರೆ ಇವರನ್ನೆಲ್ಲಾ ನೋಡಿ ದೇಶದ ಜನತೆ ನಗುತ್ತಿದ್ದಾರೆ ಎಂದು ಮೋದಿ ಸಿಎಂ ಹೆಚ್ ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ತಮ್ಮ ಸರ್ಕಾರದ ಸಾಧನೆಗಳನ್ನೂ ಜನತೆಗೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟರಿಗೆ ಮೋದಿ ಅಂದರೆ ಕಷ್ಟವಾಗಿದೆ. 40 ವರ್ಷಗಳಲ್ಲಿ ಆಗದ ಕೆಲಸವನ್ನು 4.5 ವರ್ಷಗಳಲ್ಲಿ ಮಾಡಿದ್ದೇವೆ. ಕರ್ನಾಟಕದಲ್ಲಿ ಚುನಾವಣೆ ಎದುರಾದಾಗ ಬರೊಬ್ಬರಿ 43 ಲಕ್ಷ ರೈತರ ಸಾಲ ಮನ್ನಾ ಮಾಡುವುದಾಗಿ ವಿಪಕ್ಷಗಳು ಭರವಸೆ ನೀಡಿದ್ದವು. ಆದರೆ ಈ ವರೆಗೂ ಕೇವಲ 700 ಜನರ ಸಾಲ ಮನ್ನಾ ಆಗಿದೆಯಷ್ಟೇ. ದಶಕಗಳಿಂದ ಇವರು ರೈತರಿಗೆ ಸುಳ್ಳು ಭರವಸೆಗಳನ್ನೇ ನೀಡುತ್ತಾ ಬಂದಿದ್ದಾರೆ. ಇದನ್ನು ಬದಲಾವಣೆ ಮಾಡಬೇಕು. ಈ ಬದಲಾವಣೆಗಾಗಿಯೇ ನಮ್ಮ ಸರ್ಕಾರ 12 ಕೋಟಿ ರೈತರಿಗೆ ನೇರವಾಗಿ ಸಹಾಯವಾಗುವ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಪ್ರತಿ ವರ್ಷವೂ ರೈತರಿಗೆ ನೆರವು ಸಿಗಲಿದೆ ಎಂದು ಮೋದಿ ಹೇಳಿದ್ದಾರೆ.