ಕಾರವಾರ: ತನ್ನ ತಾಯಿಯ ಚಿತೆಗೆ ಬೆಂಕಿ ಇಡುವ ವೇಳೆಯೇ ಹೃದಯಾಘಾತವಾಗಿ ಮಗನೊಬ್ಬ ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.
ಕಾರವಾರ ತಾಲೂಕು ಸಿದ್ಧರ ಗ್ರಾಮದಲ್ಲಿ ಸಂಭವಿಸಿದ ಘಟನೆಯಲ್ಲಿ ಮಂಜುನಾಥ್ (49) ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ಇವರ ತಾಯಿ ಸಾವಿತ್ರಿ ಕೊಳಂಬಕರ್ ಮಂಗಳವಾರವಷ್ಟೇ ನಿಧನರಾಗಿದ್ದರು.
ತಾಯಿಯನ್ನು ಬಹಳವೇ ಪ್ರೀತಿಸುತ್ತಿದ್ದ ಮ್ಮಂಜುನಾಥ್ ತಾಯಿಯ ಮರಣದಿಂದ ಆಘಾತಗೊಂಡಿದ್ದ, ಮತ್ತೆ ತಾಯಿಯ ಅಂತ್ಯಕ್ರಿಯೆ ನಡೆವಾಗಲೇ ಹೃದಯಾಘಾತದಿಂದ ತಾನೂ ಸಾವಿಗೀಡಾಗಿದ್ದಾನೆ.
ತಾಯಿ ಚಿತೆಗೆ ಬೆಂಕಿ ಇಡುತ್ತಲೇ ಮಂಜುನಾಥ್ ಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ಸಿದ್ಧರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚುವರಿ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಸಾವಿಗೀಡಾಗಿದನೆಂದು ಪೋಲೀಸರು ವಿವರಿಸಿದರು.
ಮೃತನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.ಕಾರವಾರ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.