ಮಂಗಳೂರು: ಮಂಗಳೂರು ನಗರಕ್ಕೆ ಮೂರು ಹೆಚ್ಚುವರಿ ಎಕ್ಸ್ ಪ್ರೆಸ್ ರೈಲುಗಳು ಶೀಘ್ರವೇ ಸಂಚರಿಸಲಿವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರು-ಬೆಂಗಳೂರು ನೂತನ ರೈಲು ಸಂಚಾರರಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಈ ಪ್ರಸ್ತಾವನೆಗೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಆಮೆ ನಡಿಗೆಯಲ್ಲಿದ್ದ ರೈಲ್ವೆ ಅಭಿವೃದ್ಧಿ ಕಳೆದ ಐದು ವರ್ಷಗಳ ಲ್ಲಿ ಕುದುರೆ ವೇಗ ಪಡೆದಿದೆ ಎಂದರು. ರೈಲ್ವೆ ಸಾಕಷ್ಟು ಪರಿವರ್ತನೆ ಆಗಿದ್ದು, ಐದು ವರ್ಷಗಳಲ್ಲಿ ದ.ಕ. ಜಿಲ್ಲೆಗೆ 15೦೦ ಕೋಟಿ ರೂ. ಬಂದಿದೆ. ಮುಂದಿನ ದಿನಗಳಲ್ಲಿ ಮಂಗಳೂರು ರೈಲ್ವೆ ಅಭಿವೃದ್ಧಿ ಕೂಡ ಆಗಲಿದೆ.
ದೇ ಸಂದರ್ಭದಲ್ಲಿ ಕಬಕ ಪುತ್ತೂರು ನಿಲ್ದಾಣದಲ್ಲಿ ಪ್ಲಾಟ್ಫಾರಂ ವಿಸ್ತರಣೆ, ಬಂಟ್ವಾಳ ನಿಲ್ದಾಣದ ಪ್ಲಾಟ್ ಫಾರಂ ವಿಸ್ತರಣೆ ಮತ್ತು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಬೆಂಗಳೂರಿನಿಂದ ಹೊರಡುವ ರೈಲು ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ತಲುಪಲಿದೆ. ವಾರದಲ್ಲಿ ಮೂರು ದಿನಗಳ ಕಾಲ ಈ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.
ಈ ಹೊಸ ರೈಲು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ. ಸದ್ಯಕ್ಕೆ ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುವ ರೈಲು ಮಾರ್ಚ್ನ ಆನಂತರ ಪ್ರತೀ ದಿನ ರಾತ್ರಿ ವೇಳೆ ಸಂಚರಿಸಲಿದೆ ಎಂದು ಹೇಳಲಾಗಿದೆ.