ಕನ್ನಡದ ಪಾಲಿಗೆ 'ಕುಟಾರಸ್ವಾಮಿ' ಆಗಬೇಡಿ: ಸಿಎಂಗೆ ಚಂಪಾ ಕುಟುಕು

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕನ್ನಡ ವೃಕ್ಷದ ಪಾಲಿಗೆ ಎಂದಿಗೂ 'ಕುಟಾರಸ್ವಾಮಿ' ಆಗಬಾರದು ಎಂದು....
ಚಂದ್ರಶೇಖರ್ ಪಾಟೀಲ್
ಚಂದ್ರಶೇಖರ್ ಪಾಟೀಲ್
ಧಾರವಾಡ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕನ್ನಡ ವೃಕ್ಷದ ಪಾಲಿಗೆ ಎಂದಿಗೂ 'ಕುಟಾರಸ್ವಾಮಿ' ಆಗಬಾರದು ಎಂದು ನಿಕಟಪೂರ್ವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್ ಅವರು ಶುಕ್ರವಾರ ಕುಟುಕಿದರು.
ಇಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಚಂಪಾ ಅವರು, ಕನ್ನಡವೆಂಬುದು ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಒಂದು ಬೃಹತ್ ವೃಕ್ಷ. ನಮ್ಮ ಪ್ರೀತಿಯ ಮುಖ್ಯಮಂತ್ರಿಯವರಾದ ಕುಮಾರಸ್ವಾಮಿ ಅವರು ಕನ್ನಡ ವೃಕ್ಷದ ಪಾಲಿಗೆ  ಎಂದಿಗೂ 'ಕುಟಾರಸ್ವಾಮಿ' ಆಗಬಾರದು ಎಂದು ಹೇಳುವ ಮೂಲಕ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಆಂಗ್ಲ ಮಾಧ್ಯಮ ಆರಂಭಿಸುವ ವಿಚಾರದಲ್ಲಿ ಸರ್ಕಾರದ ಖಚಿತ ನಿಲುವು ಏನು ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಚಂಪಾ, ಕುಮಾರಸ್ವಾಮಿ ಅವರು ಈ ನಾಡಿನ ಮಣ್ಣಿನ ಮಗ. ಪ್ರಾದೇಶಿಕ ಪಕ್ಷದ ನಾಯಕ. ಅವರ ತಂದೆ ಈ ದೇಶದ ಪ್ರಧಾನಿ ಆಗಿದ್ದವರು. ಕನ್ನಡದ ಅಳಿವು, ಉಳಿವು ಮತ್ತು ನಮ್ಮ ಜನಭಾಷೆಯ ಅಸ್ಮಿತೆಯ ರಕ್ಷಣೆಯ ವಿಷಯದಲ್ಲಿ ಸರ್ಕಾರದ ನಿಲುವು ಏನಾದರೂ ಇದ್ದರೆ ಅದನ್ನು ಕಮಾರಸ್ವಾಮಿ ಅವರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಇಂಗ್ಲಿಷ್ ಕಲಿಕೆಗೆ ಅನಗತ್ಯ ಒಲವು ಬೆಳೆಯುತ್ತಿದೆ. ಅದು ದ್ರಾವಿಡ ಭಾಷೆಯ ಜಾಯಮಾನಕ್ಕೆ ಒಗ್ಗುವುದಿಲ್ಲ. ಇಂಗ್ಲಿಷ್ ಕಲಿಕೆಗೆ ಯಾರ ವಿರೋಧವೂ ಇಲ್ಲ. ವಿರೋಧಿಸಬಾರದು. ಅದು ಸಾಧ್ಯವೂ ಇಲ್ಲ. ಆದರೆ ಪ್ರಾಥಮಿಕ ಶಿಕ್ಷಣದ ಹಂತದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದಕ್ಕೆ ಆತುರದ ನಿರ್ಧಾರ ಸಲ್ಲದು ಎಂದು ಚಂಪಾ ಪ್ರತಿಪಾದಿಸಿದರು.
ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡಿದೆ. ಅದಕ್ಕೂ ಮೊದಲು ಶಿಕ್ಷಣ ತಜ್ಞರೊಂದಿಗೆ ಮತ್ತು ಕನ್ನಡಪರ ಹೋರಾಟಗಾರರೊಂದಿಗೆ ಚರ್ಚಿಸಿಲ್ಲ. ಈ ಕುರಿತು ಸಿಎಂ ಭೇಟಿ ಮಾಡಿ ಚರ್ಚಿಸಿದಾಗ, ಕಣ್ತಪ್ಪಿನಿಂದ ಬಜೆಟ್ ನಲ್ಲಿ ಹಾಗೆ ಪ್ರಕಟವಾಗಿದೆ ಎಂದು ಹೇಳಿದ್ದರು. ಆದರೆ ಇತ್ತೀಚಿಗೆ ಬೆಳವಾಗಿ ಅಧಿವೇಶನದಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವುದಕ್ಕೆ ಹಣಕಾಸು ಒದಗಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. ಇದು ಆತಂಕದ ವಿಚಾರ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com