ಬೆಂಗಳೂರು: ಎನ್ ಡಿಎ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ವ್ಯಾಪಾರ ಸಂಘಟನೆಗಳು ರಾಷ್ಟ್ರಾದ್ಯಂತ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಕರೆ ನೀಡಿರುವ ಬಂದ್ ನಿಂದ ಸಾರಿಗೆ ಸಂಚಾರ ವ್ಯವಸ್ಥೆಯ ಮೇಲೆ ವ್ಯತ್ಯಯವುಂಟಾಗುವ ಸಾಧ್ಯತೆಯಿದೆ. ಇದರಿಂದಾಗಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ಕೂಡ ಸಂಚಾರ ನಡೆಸದಿರಲು ನಿರ್ಧರಿಸಿವೆ.
ತಮ್ಮ ಸಂಘಟನೆಯ ಸುಮಾರು 10 ಸಾವಿರ ವ್ಯಾನ್ ಚಾಲಕರು ಬಂದ್ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ವಾಹನ ಸಂಚಾರ ನಡೆಸದೇ ಇರಲು ನಿರ್ಧರಿಸಿವೆ ಎಂದು ಕರ್ನಾಟಕ ಶಾಲೆಗಳ ಒಕ್ಕೂಟಗಳು ಮತ್ತು ಹಗುರ ಮೋಟಾರು ವಾಹನಗಳ ಚಾಲಕರ ಒಕ್ಕೂಟ ತಿಳಿಸಿದೆ. ಈ ಒಕ್ಕೂಟದಲ್ಲಿ ಬಾಡಿಗೆಗೆ ಸಂಚರಿಸುವ ಶಾಲಾ ವ್ಯಾನ್ ಚಾಲಕರು, ಶಾಲೆಗಳಿಗೆ ಗುತ್ತಿಗೆ ಆಧಾರದಲ್ಲಿ ವ್ಯಾನ್ ಸೇವೆ ವ್ಯವಸ್ಥೆ ಕಲ್ಪಿಸುವವರು ಸೇರಿರುತ್ತಾರೆ. ಶಾಲೆಗಳಿಂದಲೇ ಸಂಚಾರದ ವ್ಯವಸ್ಥೆಯನ್ನು ಹೊಂದಿರುವ ಬಸ್, ವ್ಯಾನ್ ಗಳು ಒಳಗೊಂಡಿರುವುದಿಲ್ಲ. ಇಂತಹ ಬಸ್ಸು, ವ್ಯಾನ್ ಗಳ ಸಂಚಾರ ಕುರಿತು ನಾಳೆ ಮತ್ತು ನಾಡಿದ್ದು ಶಾಲಾ ವ್ಯವಸ್ಥಾಪಕ ಮಂಡಳಿಯೇ ನಿರ್ಧರಿಸಲಿದೆ.
ನಾಳೆ ಮತ್ತು ನಾಡಿದ್ದು ರಜೆಯ ಕುರಿತು ಇಂದು ಆಯಾ ಶಾಲೆಗಳಲ್ಲಿ ನಿರ್ಧಾರವಾಗಲಿದೆ. ಶಾಲೆಗಳಿದ್ದರೆ ಬಹುಶಃ ನಾಳೆ ಮತ್ತು ನಾಡಿದ್ದು ಪೋಷಕರೇ ತಮ್ಮ ಮಕ್ಕಳಿಗೆ ಸಂಚಾರದ ವ್ಯವಸ್ಥೆ ಮಾಡಬೇಕಾಗಿ ಬರಬಹುದು.
ಬೆಂಗಳೂರಿನಲ್ಲಿ ಸುಮಾರು 20 ಸಾವಿರ ವ್ಯಾನ್ ಚಾಲಕರಿದ್ದು, ರಾಜ್ಯದಲ್ಲಿ ಒಟ್ಟಾರೆಯಾಗಿ ಸುಮಾರು 43 ಸಾವಿರ ವ್ಯಾನ್ ಚಾಲಕರಿದ್ದಾರೆ ಎನ್ನುತ್ತಾರೆ ಕರ್ನಾಟಕ ಸಂಯುಕ್ತ ಶಾಲೆಗಳು ಮತ್ತು ಹಗುರ ಮೋಟಾರು ವಾಹನಗಳ ಚಾಲಕರ ಒಕ್ಕೂಟದ ಅಧ್ಯಕ್ಷ ಶಣ್ಮುಗಮ್ ಪಿಎಸ್.
ತಮ್ಮ ಪ್ರದೇಶಗಳ ಪರಿಸ್ಥಿತಿಯನ್ನು ನೋಡಿಕೊಂಡು ಆಯಾ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಭದ್ರತೆ, ರಕ್ಷಣೆ ನೋಡಿಕೊಂಡು ನಾಳೆ ಮತ್ತು ನಾಡಿದ್ದು ಶಾಲೆಗಳಿಗೆ ರಜೆ ನೀಡಬೇಕೆ, ನೀಡಬಾರದೆ ಎಂಬುದನ್ನು ನಿರ್ಧರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ವ್ಯವಸ್ಥಾಪಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ತಿಳಿಸಿದ್ದಾರೆ.
ಇನ್ನು ಪರೀಕ್ಷೆ ನಡೆಯಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಪರೀಕ್ಷೆಯನ್ನು ನಡೆಸಬೇಕೆ ಮುಂದೂಡಬೇಕೆ ಎಂಬ ಬಗ್ಗೆ ಇನ್ನೂ ನಿಗದಿಯಾಗಿಲ್ಲ.
Advertisement