ಬೆಂಗಳೂರು: ವಿಧಾನಸೌಧದಲ್ಲಿ ಸೂಕ್ತ ದಾಖಲೆಗಳಲ್ಲದ ನಗದು ಸಿಕ್ಕಿದ ಪ್ರಕರಣ ನಂತರ ಸ್ಟೆನೊಗ್ರಾಫರ್ ಮೋಹನ್ ಕುಮಾರ್ ಮಾಡಿರುವ ತಪ್ಪೊಪ್ಪಿಗೆ ಮತ್ತು ಹೇಳಿಕೆ ಹಿನ್ನಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಇಲಾಖೆ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಸಿ ಪುಟ್ಟರಂಗ ಶೆಟ್ಟಿ ಅವರನ್ನು ತನಿಖೆ ಮಾಡುವ ಸಾಧ್ಯತೆಯಿದೆ.
ಅಧಿಕಾರಿಗಳು ನಗದು ಸಿಕ್ಕಿದ ಹಿಂದಿನ ಸಾಕ್ಷಿಗಳನ್ನು ಸಂಗ್ರಹಿಸಲು ಯತ್ನಿಸುತ್ತಿದ್ದು ಇತರ ಆರೋಪಿಗಳನ್ನು ಕೂಡ ಸದ್ಯದಲ್ಲಿಯೇ ವಿಚಾರಣೆಗೊಳಪಡಿಸಲಿದ್ದಾರೆ.
ನಿನ್ನೆ ಮೋಹನ್ ನನ್ನು ಎಸಿಬಿ ಕಸ್ಟಡಿಗೆ ಒಪ್ಪಿಸಿದ ನಂತರ ಅಧಿಕಾರಿಗಳು ಇದೀಗ ಮೋಹನ್ ನ ಮೊಬೈಲ್ ಫೋನ್ ಪಡೆಯಲು ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ಸಿಕ್ಕಿದೆ. ಆ ಮೂಲಕ ಆತ ಯಾರ ಸಂಪರ್ಕದಲ್ಲಿ ಇದ್ದ ಎಂದು ತಿಳಿದುಬರಲಿದೆ.
ಮೋಹನ್ ಬಳಿಯಿದ್ದ ಹಣವನ್ನು ವಿವಿಧ ಮೂಲಗಳಿಂದ ಪಡೆದುದು ಎಂದು ತಿಳಿದುಬಂದಿದೆ. ಎರಡು ಕಡೆಗಳಿಂದ ಮೋಹನ್ ಖುದ್ದಾಗಿ ಹೋಗಿ ನಗದು ಸ್ವೀಕರಿಸಿ ತಂದಿದ್ದು ಮತ್ತಿಬ್ಬರು 8 ಲಕ್ಷ ರೂಪಾಯಿ ನಗದು ಪಡೆದುಕೊಂಡು ವಿಧಾನ ಸೌಧಕ್ಕೆ ಬಂದಿದ್ದರು ಎಂದು ಸಹ ತಿಳಿದುಬಂದಿದೆ. ಅನಂತ್ ಶಂಕರ್ ಎಂಬುವವನು 3.6 ಲಕ್ಷ ನಗದಿನೊಂದಿಗೆ ವಿಧಾನಸೌಧದ ಕಚೇರಿಗೆ ಬಂದಿದ್ದರೆ ಮತ್ತೊಬ್ಬ ಕೃಷ್ಣಮೂರ್ತಿ ಎಂಬಾತ 4.26 ಲಕ್ಷ ನಗದಿನೊಂದಿಗೆ ಬಂದಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement