ಬೆಂಗಳೂರು: ಕೆಎಸ್ ಆರ್ ಟಿಸಿ ಐರಾವತ ಕ್ಲಬ್ ಕ್ಲಾಸ್ ಬಸ್ಸಿನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 15 ಲಕ್ಷ ಮೌಲ್ಯದ ಬೆಳ್ಳಿ ದೀಪಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆಎಸ್ಆರ್ ಟಿಸಿ ವಿಶೇಷ ತನಿಖಾ ದಳ ಬೆಳ್ಳಿ ದೀಪಗಳನ್ನ ವಶಕ್ಕೆ ಪಡಿಸಿಕೊಂಡಿದೆ. ಬಸ್ ಡ್ರೈವರ್ ಮತ್ತು ಕಂಡಕ್ಟರ್ ಐರಾವತ ಕ್ಲಬ್ ಕ್ಲಾಸ್ ಬಸ್ಸಿನಲ್ಲಿ ಕರ್ನಾಟಕದಿಂದ ಆಂಧ್ರಗೆ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕೆಎಸ್ ಆರ್ ಟಿಸಿ ತನಿಖಾ ಸಿಬ್ಬಂದಿ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಹೊಸಕೋಟೆ ಬಳಿಯ ಟೋಲ್ನಲ್ಲಿ ತಪಾಸಣೆ ನಡೆಸಿದ್ದಾರೆ.
ಈ ವೇಳೆ ಬಸ್ಸಿನ ಡಿಕ್ಕಿಯಲ್ಲಿ ನಾಲ್ಕು ಬ್ಯಾಗ್ ನಲ್ಲಿ ಸುಮಾರು 40 ಕೆ.ಜಿ ತೂಕದ 700 ಬೆಳ್ಳಿ ದೀಪಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 15 ಲಕ್ಷ ರೂಪಾಯಿ ಎಂದು ವರದಿಯಾಗಿದೆ.
ಈ ಘಟನೆ ಸಂಬಂಧ ಕೆಎಸ್ಆರ್ ಟಿಸಿಯ ಐರಾವತ ಕ್ಲಬ್ ಕ್ಲಾಸ್ ಬಸ್ ಚಾಲಕ, ನಿರ್ವಾಹಕನನ್ನು ಅಮಾನತು ಮಾಡಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಲ್ಲದೇ ಈ ಸಂಬಂಧ ತನಿಖೆಯನ್ನ ಮುಂದುವರಿಸಿದ್ದಾರೆ. ಸದ್ಯ ವಶಪಡಿಸಿಕೊಂಡಿದ್ದ ದೀಪಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಬಸ್ ನಲ್ಲಿ 45 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.