ಹಾಸನ:ವಿವಾದಾತ್ಮಕ ಹೇಳಿಕೆಗಳು ಮತ್ತು ಹಾಸ್ಯಾಸ್ಪದ ವರ್ತನೆಗಳ ಮೂಲಕ ಆಗಾಗ ಸುದ್ದಿಯಾಗುವ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನಿನ್ನೆ ಜಿಲ್ಲಾ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ದಕ್ಷ ಜಿಲ್ಲಾಧಿಕಾರಿ ಎಂದು ಹೆಸರಾಗಿರುವ ರೋಹಿಣಿ ಸಿಂಧೂರಿ ವಿರುದ್ಧ ಸಚಿವ ರೇವಣ್ಣ ನಯವಾಗಿಯೇ ರೇಗಾಡಿದ ಪ್ರಸಂಗ ನಡೆಯಿತು.
ವೃದ್ಯಾಪ್ಯ ವೇತನಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ದಕ್ಷ ಅಧಿಕಾರಿ ಎಂದು ಹೆಸರಾಗಿರುವ ನೀವು ಸರಿಯಾಗಿ ಕೆಲಸ ಮಾಡದ ಕೆಳಹಂತದ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಚಿವ ರೇವಣ್ಣ ಸಭೆಯಲ್ಲಿ ನಯವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕೇಳಿದರು.
ಡಿಸಿ ಬರ್ತಾರೆ ಅಂದ್ರೆ ಅಧಿಕಾರಿಗಳು ನಡುಗಬೇಕು ಹಂಗಿರಬೇಕು ನಮ್ಮ ಜಿಲ್ಲೆ. ರಾಜ್ಯದ ಚೀಫ್ ಸೆಕ್ರೇಟರಿ, ಫೈನಾನ್ಸ್ ಸೆಕ್ರೇಟ್ರಿ ಎಲ್ಲಾ ನಿಮ್ಮ ಡಿಸಿ ಡೈನಾಮಿಕ್ ಹಂಗೆ ಹಿಂಗೆ ಅಂತಾರೆ. ಇಲ್ನೋಡಿದ್ರೆ ಹಿಂಗೆ ಎಂದು ರೇವಣ್ಣ ತರಾಟೆಗೆ ತೆಗೆದುಕೊಂಡರು.
ದಿನಾ ಬಂದು ಜನ ನಮ್ಮನೆ ಮುಂದೆ ನಿಲ್ತಾರೆ. ನಿಮ್ಮ ಅಧಿಕಾರಿಗಳು ಏನು ಮಾಡ್ತಿದ್ದಾರೆ ಎಂದು ಡಿಸಿಗೆ ಕ್ಲಾಸ್ ತೆಗೆದುಕೊಂಡರು. ಕೆಳಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಒಂದು ನಾಲ್ಕು ಜನ ತಹಸಿಲ್ದಾರ್ ರನ್ನ ಸಸ್ಪೆಂಡ್ ಮಾಡಿ ಎಂದರು.
ಅದಕ್ಕೆ ರೋಹಿಣಿ ಸಿಂಧೂರಿ ಎಲ್ಲ ಕಳ್ಳರನ್ನ ಸಸ್ಪೆಂಡ್ ಮಾಡುತ್ತಾ ಕೂತ್ರೆ ಯಾರೂ ಇರಲ್ಲ ಎಂದು ತಿರುಗೇಟು ನೀಡಿದರು.
ಆಗ ರೇವಣ್ಣ ಮೇಡಂ ಎಲ್ಲರನ್ನೂ ಸಸ್ಪೆಂಡ್ ಮಾಡಿ ಎಂದು ನಾನು ಹೇಳಿದ್ದಲ್ಲ,ಅವರಿಗೆ ಚುರುಕು ಮುಟ್ಟಿಸಿ ಎಂದರು. ಕೆಲಸ ನಡೆಯುತ್ತಿದೆಯಲ್ಲಾ. ಮೂರು ತಿಂಗಳಿಂದ ನಾಲ್ಕು ತಹಶಿಲ್ದಾರರನ್ನ ಕೇಳುತ್ತಿದ್ದೇವೆ ಕೊಟ್ಟಿಲ್ಲ ಎಂದು ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆ ಕೆಲಸ ತೊಂದರೆಗೆ ಸರ್ಕಾರವೇ ಕಾರಣ ಎಂಬ ಅರ್ಥದಲ್ಲಿ ರೋಹಿಣಿ ಸಿಂಧೂರಿ ಮಾತನಾಡಿದರು.
Advertisement