ರಾಯಚುರು: ನನ್ನ ಹೆಂಡ್ತಿ ನನಗೆ ಬೇಕು! ಹೀಗೆಂದು ತನ್ನ ಪ್ರೀತಿಯ ಪತ್ನಿಗಾಗಿ ಪತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತ ವಿಚಿತ್ರ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆಯ ಹತ್ತಿರ ಶಾಂತ ಕುಮಾರ್ ಎಂಬ ವ್ಯಕ್ತಿ ಬಿಎಸ್ಎನ್ಎಲ್ ಟವರ್ ಏರಿದ್ದಾನೆ. ತನಗೆ ನನ್ನ ಪತ್ನಿ ಬೇಕು, ಆಕೆಯ ಮನೆಯವರು ಅವಳನ್ನು ನನ್ನ ಮನೆಗೆ ಕಳಿಸಬೇಕೆಂದು ಆತ ಬೇಡಿಕೆ ಇಟ್ಟಿದ್ದಾನೆ.
ಘಟನೆಯ ಹಿನ್ನೆಲೆ
ಶಾಂತ ಕುಮಾರ್ ಹಾಗೂ ಅಸ್ಕಿಹಾಳ ಗ್ರಾಮದ ಕವಿತಾ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಈ ವಿವಾಹಕ್ಕೆ ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.
ಅದೊಮ್ಮೆ ಕವಿತಾ ಮನೆಯವರು ಆಕೆಗೆ ಕರೆ ಮಾಡಿ "ನೀನು ಹಿಂತಿರುಗದಿದ್ದರೆ ನಾವೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ. ಹಾಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕವಿತಾ ತವರು ಮನೆಗೆ ಹೋಗಿದ್ದಾಳೆ. ಆದರೆ ಒಮ್ಮೆ ತವರಿಗೆ ಹೋದ ಅವಳನ್ನು ಮತ್ತೆ ಪತಿಯ ಮನೆಗೆ ಕಳೆಸದೆ ಕಾಡಿಸುತ್ತಿದ್ದಾರೆ ಎಂದು ಶಾಂತ ಕುಮಾರ್ ಆರೋಪಿಸಿದ್ದಾರೆ.
ಅಲ್ಲದೆ ಆಕೆಯನ್ನು ಅದೆಲ್ಲಿ ಮುಚ್ಚಿಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ, ಅವಳೆಲ್ಲಿದ್ದಾಳೆ ಎಂದರೆ ಹೇಳುತ್ತಿಲ್ಲ. ಅವಳ ಸುಳಿವನ್ನು ನೀಡುತ್ತಿಲ್ಲ. ನನಗೆ ನನ್ನ ಪತ್ನಿ ಬೇಕೇ ಬೇಕು ಎಂದು ಹೇಳುವ ಶಾಂತ ಕುಮಾರ್ ಈಗ ಮೊಬೈಲ್ ಟವರ್ ಏರಿ ಕವಿತಾ ಮನೆಯವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.