ಚಾಮರಾಜನಗರ: ಕಾಡಾನೆ ದಾಳಿ ವೇಳೆ ತನ್ನ ಮಗುವನ್ನು ಕಾಪಾಡಿದ ತಾಯಿ ತನ್ನನ್ನೇ ಬಲಿ ಕೊಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ದೊಡ್ಡಾಣೆ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದ ಬಳಿಯ ಹಳೆಯೂರು ಗ್ರಾಮದ ಗೌರಮ್ಮ(45) ಕಾಡಾನೆ ದಾಳಿಗೆ ಬಲಿಯಾದ ಮಹಿಳೆ. ದೊಡ್ಡಾಣೆ ಗ್ರಾಮದಲ್ಲಿ ಹಬ್ಬ ಮುಗಿಸಿ 4 ವರ್ಷದ ಹೆಣ್ಣು ಮಗುವಿನೊಂದಿಗೆ ಗೌರಮ್ಮ ಊರಿಗೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ದಾರಿ ಮಧ್ಯೆ ಕಾಡಾನೆ ಎದುರಾಗಿದೆ. ಕಾಡಾನೆ ಕಂಡ ತಕ್ಷಣ ಕಂಕುಳಲ್ಲಿದ್ದ ಮಗುವನ್ನು ಗೌರಮ್ಮ ಬೇಲಿಗೆ ಎಸೆದಿದ್ದಾರೆ.
ಗೌರಮ್ಮನವರ ಮೇಲೆ ದಾಳಿ ನಡೆಸಿದ ಕಾಡಾನೆ ತುಳಿದು ಸಾಯಿಸಿದೆ. ಮಗುವನ್ನು ಬೇಲಿಗೆ ಎಸೆದಿದ್ದರಿಂದ ಹೆಣ್ಣು ಮಗು ಅಪಾಯದಿಂದ ಪಾರಾಗಿದೆ. ಹೆಣ್ಣುಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.