ಕೊನೆಗೂ ಅತೃಪ್ತರಿಗೆ ಶಾಕ್ ಕೊಟ್ಟ ಸ್ಪೀಕರ್, ಎಲ್ಲ 14 ಅತೃಪ್ತ ಶಾಸಕರನ್ನೂ ಅನರ್ಹಗೊಳಿಸಿದ ರಮೇಶ್ ಕುಮಾರ್!

ನಿರೀಕ್ಷೆಯಂತೆಯೇ ಮುಂಬೈಗೆ ಹಾರಿರುವ ಎಲ್ಲ 14 ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಕ್ ನೀಡಿದ್ದು, ಅವರ ಶಾಸಕತ್ವ ಅನರ್ಹಗೊಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಿರೀಕ್ಷೆಯಂತೆಯೇ ಮುಂಬೈಗೆ ಹಾರಿರುವ ಎಲ್ಲ 14 ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಕ್ ನೀಡಿದ್ದು, ಅವರ ಶಾಸಕತ್ವ ಅನರ್ಹಗೊಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, 14 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಎಲ್ಲ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದರು.
ಭಾನುವಾರವೂ ಕಚೇರಿ ಕಾರ್ಯನಿರ್ವಹಣೆ, ದಿಢೀರ್ ಸುದ್ದಿಗೋಷ್ಠಿ ಕುರಿತು ಸ್ಪಷ್ಟನೆ ನೀಡಿದ ಸ್ಪೀಕರ್
ಜುಲೈ 23ರಂದು ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವಲ್ಲಿ ವಿಫಲವಾಗಿದ್ದರಿಂದ ರಾಜೀನಾಮೆ ನೀಡಿದ್ದರು. ಅಂತೆಯೇ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಜುಲೈ 26ರಂದು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ನನ್ನನ್ನು ಸಂಪರ್ಕಿಸಿ, 31ರಂದು ಸರ್ಕಾರದ ಧನವಿನಿಯೋಗ ಮಸೂದೆ ಅಂತ್ಯಗೊಳ್ಳಲಿದೆ.  ಹಾಗಾಗಿ ಧನಿವಿನಿಯೋಗ ಮಸೂದೆ ಮತ್ತು ಇತರ ಬೇಡಿಕೆಗಳ ಮೇಲೆ ಮತಯಾಚನೆ ಆಗಬೇಕಿದೆ. ನಾನೂ ಸಭೆಯ ವಿಶ್ವಾಸಮತ ಪಡೆಯಬೇಕಿದೆ. ಆದ ಕಾರಣ ಸೋಮವಾರ ಅಧಿವೇಶನ ಕರೆಯಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

ಸೋಮವಾರ ಅಧಿವೇಶನ ನಡೆಸಲು ಸಿದ್ಧ ನಡೆಸುವಂತೆ ಕಚೇರಿಯ ಕಾರ್ಯದರ್ಶಿಗಳಿಗೂ ಸೂಚನೆ ನೀಡಿದ್ದೇನೆ. ಬಹುಮತ ಸಾಬೀತಿಗೆ ಸೋಮವಾರ ಕರೆದ ಹಿನ್ನೆಲೆಯಲ್ಲಿ ಉಳಿದ ಎಲ್ಲ ರಾಜೀನಾಮೆ ಮತ್ತು ಅನರ್ಹತೆ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿದೆ. ಹಾಗಾಗಿ ನಮ್ಮ ಕಚೇರಿಯ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ಕೂಡ ಕೆಲಸ ಮಾಡಿದ್ದಾರೆ. ಸೋಮವಾರ ಸದನದಲ್ಲಿ ನಾವು ತೊಡಗಿಕೊಳ್ಳುವದರಿಂದ ಇಂದೇ ಎಲ್ಲ ಅತೃಪ್ತ ರಾಜೀನಾಮೆ ಅರ್ಜಿಗಳ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು.

ಸ್ಪೀಕರ್ ಆಗಿರುವ ಕಾರಣಕ್ಕೆ ನನ್ನ ಮೇಲೆ ಮಾನಸಿಕ ಒತ್ತಡ ಹಾಕಲಾಗಿದೆ. ಖಿನ್ನನಾಗಿದ್ದಾನೆ. ನನ್ನ ವೈಯಕ್ತಿಕ ಜೀವನದಲ್ಲಿ ತುಳಸಿದಾಸಪ್ಪ, ಅಬ್ದುಲ್ ನಜೀರ್ ಸಾಬ್, ಬಿ.ಎ.ಮೊಯಿದ್ದೀನ್, ಎ.ಕೆ.ಸುಬ್ಬಯ್ಯ ಅವರಂಥವರಿಂದ ನಾನು ಪ್ರಭಾವಿತನಾಗಿದ್ದೇನೆ. ನನ್ನನ್ನು ರೂಪಿಸಿದವರು ಅವರು ಎಂದು ಹೇಳಿದರು.

ಅಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ಮೇರೆಗೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಕರೆಯಲಾಗಿದೆ. ವಿಶ್ವಾಸಮತ ಯಾಚನೆ, ಧನಿವಿನಿಯೋಗ ಮಸೂದೆ ಮೇಲೆ ಚರ್ಚೆ, ಪರಿಶೀಲನೆ ಮತ್ತು ಮತಕ್ಕೆ ಹಾಕುವ ವಿಚಾರವನ್ನು ಸ್ಪಷ್ಟವಾಗಿ ನಮೂದಿಸಿ ನಮ್ಮ ಕಾರ್ಯದರ್ಶಿಯ ಮೂಲಕ ಎಲ್ಲಾ ಸದಸ್ಯರಿಗೆ  ಸೂಚನ ಪತ್ರವನ್ನು ಕಳುಹಿಸಿಕೊಟ್ಟಿದ್ದೇನೆ. ಇದಕ್ಕಾಗಿ ನಮ್ಮ ಕಾರ್ಯಾಲಯ ಶನಿವಾರ, ಭಾನುವಾರ ಎರಡೂ ದಿನ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com