ಮೈತ್ರಿ ಸರ್ಕಾರದ ಪತನ ಹಾಗೂ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಕುಮಠಹಳ್ಳಿ ಹಾಗೂ ಪಕ್ಷೇತರ ಶಾಸಕ ಶಂಕರ್ ಸದಸ್ಯತ್ವವನ್ನು ಅನರ್ಹಗೊಳಿಸಿ ಸ್ಪೀಕರ್ ನಿರ್ಧಾರ ಪ್ರಕಟಿಸಿದ ತಕ್ಷಣ ಸಕ್ರೀಯಗೊಂಡ ಬಿಜೆಪಿ ನಾಯಕರು, ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಿದ್ದರು. ಮೈತ್ರಿ ಸರ್ಕಾರದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ವಿಶ್ವಾಸಮತಕೋರುವುದಾಗಿ, ಹಣಕಾಸು ವಿಧೇಯಕ ಮಂಡಿಸಿವುದಾಗಿ ಪ್ರಕಟಿಸಿದರು. ಸಿಬ್ಬಂದಿಯ ವೇತನ ಮತ್ತಿತರ ಸರ್ಕಾರಿ ವೆಚ್ಚಗಳಿಗೆ ಹಣಪಡೆಯಲು ವಿಧಾನಸಭೆ ಜುಲೈ 31ರೊಳಗೆ ಹಣಕಾಸು ವಿಧೇಯಕ ಅಂಗೀಕರಿಸಬೇಕಿದೆ.