ಸದ್ಯ ನಗರದಲ್ಲಿ ಪ್ರತಿನಿತ್ಯ 4 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 2,500 ಟನ್ ಬೆಳ್ಳಳ್ಳಿ ಕ್ವಾರಿಗೆ, 500 ಟನ್ ಎಂಎಸ್ ಜಿಪಿ ಘಟಕ ಹಾಗೂ 500 ಟನ್ ಸಂಸ್ಕರಣಾ ಘಟಕಗಳಿಗೆ ಸಾಗಿಸಲಾಗುತ್ತಿದೆ. ಒಟ್ಟು ಸಂಗ್ರಹಣೆಯಾಗುವ ತ್ಯಾಜ್ಯದ ಪೈಕಿ 500 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕಸವನ್ನು ಕ್ವಾರಿಗೆ ಸಾಗಿಸಲು ಸಾಧ್ಯವಿಲ್ಲ. ಎನ್ ಜಿಟಿ ಆದೇಶದ ಪ್ರಕಾರ, ಕೆಲವೇ ತಿಂಗಳ ಕಾಲ ಮಾತ್ರ ಕ್ವಾರಿಗಳಿಗೆ ತ್ಯಾಜ್ಯ ರವಾನಿಸಲು ಅನುಮತಿ ದೊರೆತಿದೆ. ಈಗಾಗಲೇ ಕಸ ತುಂಬಿರುವ ಕ್ವಾರಿಯಿಂದಲೇ ಕಸವನ್ನು ಹೊರತೆಗೆದು ಬೇರ್ಪಡಿಸುವಂತೆ ಸೂಚನೆ ನೀಡಿದ್ದು, ಅದಕ್ಕಾಗಿ ದಂಡವನ್ನೂ ವಿಧಿಸಿದೆ. ಮುಂದಿನ ದಿನಗಳಲ್ಲಿ ಕ್ವಾರಿಗಳನ್ನು ಸಂಪೂರ್ಣ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಕಸ ವಿಂಗಡಣೆ ಅನಿವಾರ್ಯವಾಗಲಿದೆ. ಹಸಿ ಕಸವನ್ನು ಸಂಸ್ಕರಣೆ ಹಾಗೂ ಒಣ ಕಸವನ್ನು ಮರುಬಳಕೆ ಇಲ್ಲವೇ ತ್ಯಾಜ್ಯ ಇಂಧನ ಬಳಕೆಗೆ ಬಳಸಬೇಕಾಗುತ್ತದೆ ಎಂದರು.