ರಾಜ್ಯ
ಉಡುಪಿ: ಮಲ್ಪೆ ಬಂದರಿನಲ್ಲಿ ದುಷ್ಕರ್ಮಿಗಳಿಂದ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ತಲವಾರು ದಾಳಿ
ಫರಂಗಿಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಉಡುಪಿ: ಫರಂಗಿಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮೀನು ವ್ಯಾಪಾರಕ್ಕಾಗಿ ಮಲ್ಪೆಗೆ ಆಗಮಿಸಿದ್ದ ಫರಂಗಿಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯ ರಿಯಾಝ್ (34) ಎಂಬುವವರ ಮೇಲೆ ಮುಸುಕುಧಾರಿ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ರಿಯಾಝ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ನಸುಕಿನ ವೇಳೆ ಮೀನು ವ್ಯಾಪಾರಕ್ಕೆಂದು ಫರಂಗಿಪೇಟೆಯಿಂದ ಮಲ್ಪೆಗೆ ಇತರೆ ಮೂವರೊಡನೆ ರಿಯಾಝ್ ಆಗಮಿಸಿದ್ದರು.ಬಂದರಿನಲ್ಲಿ ವಾಹನ ನಿಲ್ಲಿಸಿದ್ದಾಗ ಇತರೆ ಮೂವರೂ ಜತೆಗಾರರು ಇಳಿದು ಹೋಗಿದ್ದರೆ ರಿಯಾಝ್ ಮಾತ್ರ ವಾಹನದಲ್ಲೇ ಮಲಗಿದ್ದಾರೆ. ಆವೇಳೆ ಬಲು ದೂರದಿಂದಲೇ ಇವರ ವಾಹನ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಹೊಂಚು ಹಾಕಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ರಿಯಾಝ್ ಕುತ್ತಿಗೆ ಭಾಗಕ್ಕೆ ಪೆಟ್ಟಾಗಿದ್ದು ಕೈ ಬೆರಳೊಂದು ತುಂಡಾಗಿರುವುದಾಗಿ ತಿಳಿದುಬಂದಿದೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸೇರಿದಂತೆ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.