ಕೊಪ್ಪಳ: ಮೂವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಎಂಬಲ್ಲಿ ಸೋಮವಾರ ನಡೆದಿದೆ.
ಯಲ್ಲಮ್ಮ ಎಂಬಾಕೆ ಮಕ್ಕಳಾದ ಅಕ್ಷತಾ (7),ಕಾವ್ಯಾ(4)ಮತ್ತು ನಾಗರಾಜ್(2) ರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ಬಳಿಕ ನೇಣಿಗೆ ಶರಣಾಗಿದ್ದಾಳೆ. ಅಕ್ಷತಾಳನ್ನು ನೀರಿನ ಹಂಡೆಯಲ್ಲಿ , ಕಾವ್ಯಾಳನ್ನು ಬಕೆಟ್ನಲ್ಲಿ ಮತ್ತು ನಾಗರಾಜ್ನನ್ನು ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.
ಯಲ್ಲಮ್ಮ ಈ ಕಠಿಣ ನಿರ್ಧಾರ ತಳೆಯುವುದಕ್ಕೆ ಕಾರಣವೇನು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಗಂಡನ ಕಿರುಕುಳ ತಾಳಲಾರದೇ ನಿರ್ಧಾರ ಕೈಗೊಂಡಿದ್ದಾಳೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಪತಿ ಕುಡಿದು ಬಂದು ಗಲಾಟೆಮಾಡುತ್ತಿದ್ದ ಎಂದು ಹೇಳಲಾಗಿದೆ.
ಕೃತ್ಯ ನಡೆದಾಗ ಮನೆಯಲ್ಲಿ ಇರಲ್ಲಿಲ್ಲ ಎಂದು ಹೇಳಲಾಗಿದೆ. ತನಿಖೆ ನಡೆಸುತ್ತಿದ್ದು ನಿಖರ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಕೊಪ್ಪಳ ಎಸ್ಪಿ ರೇಣುಕಾ ಸುಕುಮಾರ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.