ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆ ಬಹಿರಂಗಪಡಿಸಿದ್ದ ಶತಾಯುಷಿ ಚೀರಮ್ಮ ವಿಧಿವಶ

ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಗಳ ಬಗ್ಗೆ ಸುಳಿವು ನೀಡಿದ್ದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಜಯಪುರ ಸಮೀಪದ ನಕ್ಸಲ್‌ ಪೀಡಿತ ಪ್ರದೇಶ .,.
ಚೀರಮ್ಮ
ಚೀರಮ್ಮ
ಬೆಂಗಳೂರು: ಕರ್ನಾಟಕದಲ್ಲಿ  ನಕ್ಸಲ್ ಚಟುವಟಿಕೆಗಳ ಬಗ್ಗೆ ಸುಳಿವು ನೀಡಿದ್ದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಜಯಪುರ ಸಮೀಪದ ನಕ್ಸಲ್‌ ಪೀಡಿತ ಪ್ರದೇಶ ಮೆಣಸಿನಹಾಡ್ಯದ ಜೇಡಿಹಟ್ಟಿಯ ಶತಾಯುಷಿ ಚೀರಮ್ಮ(100) ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸುಮಾರು 22 ವರ್ಷಗಳ ಹಿಂದೆ ಮನೆಯ ಸಮೀಪ ಆಕಸ್ಮಿಕವಾಗಿ ಹಾರಿದ ಗುಂಡು ಚೀರಮ್ಮ ಅವರ ಕಾಲಿಗೆ ತಗುಲಿದ ಹಿನ್ನೆಲೆಯಲ್ಲಿ ಮೆಣಸಿನಹಾಡ್ಯದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ನಕ್ಸಲ್‌ ಚಟುವಟಿಕೆ, ತರಬೇತಿ ವಿಚಾರಗಳು ಬೆಳಕಿಗೆ ಬಂದಿದ್ದವು. 
ಈ ಮೂಲಕ ಜಿಲ್ಲೆಯ ಮೊದಲ ನಕ್ಸಲ್‌ ಪ್ರಕರಣ ಜಯಪುರ ಠಾಣೆಯಲ್ಲಿ ದಾಖಲಾಗಿದ್ದು ಇದೀಗ ಇತಿಹಾಸ. 2002 ರ ನವೆಂಬರ್ 6 ರಂದು ಚೀರಮ್ಮ ಕಾಡಿನಲ್ಲಿ ಮರಗಳ ತುಂಡುಗಳನ್ನು ತರಲು ಹೋದಾಗ ಆಕೆಯ ಕಾಲು ಗಾಯವಾಗಿತ್ತು, ಏನಾಗಿದೆ ಎಂದು ಆಕೆಗೆ ತಿಳಿದಿರಲಿಲ್ಲ, ವೈದ್ಯರ ಬಳಿ ಹೋದಾಗ ತಿಳಿಯಿತು ಕಾಲಿಗೆ ಹೊಕ್ಕಿರುವುದು ಬುಲೆಟ್ ಎಂದು.
ನಂತರ ಈ ಸಂಬಂಧ ತನಿಖೆ ನಡೆಸಿದಾಗ ಕೊಪ್ಪದ ಮೆಣಸಿನಹಾಡ್ಯದಲ್ಲಿ  ನಕ್ಸಲ್ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಬೆಳಕಿಗೆ ಬಂತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2003 ರ ಆಗಸ್ಟ್ 3 ರಂದು ಆಕೆಯ ಮನೆಯ ಸಮೀಪ ಅಂದರೆ ಕುದುರೆಮುಖದ ಸಿನ್ಸಾಗರ ಗ್ರಾಮದ ರಾಮಚಂದ್ರ ಗೌಡ್ಲವಿನ,ಮನೆಯ ಸಮೀಪ ನಕ್ಸಲರು ಕಾಣಿಸಿಕೊಂಡಿದ್ದರು. ಇದು ರಾಜ್ಯದಲ್ಲಿ ಮೊದಲ ಬಾರಿಗೆ ಪೊಲೀಸರಿಂದ ನಡೆದ ನಕ್ಸಲ್ ಎನ್ ಕೌಂಟರ್ ಆಗಿತ್ತು. 
ಅದಾದ ನಂತರ ಹಲವು ಕೂಂಬಿಂಗ್ ಕಾರ್ಯಾಚರಣೆಗಳು ನಡೆದವು, ಸದ್ಯ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಗಳು ಬಹತೇಕ ಸ್ಥಗಿತಗೊಂಡಿವೆ,  ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹಲವರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚೀರಮ್ಮ ಅವರು ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣುಮಗಳನ್ನು ಅಗಲಿದ್ದಾರೆ. ಮಂಗಳವಾರ ಅವರ ಅಂತ್ಯಕ್ರಿಯೆ ನೆರವೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com