ಗ್ರಾಮ ವಾಸ್ತವ್ಯ: ವಿಕಲಚೇತನರ ಬಳಿಗೆ ತೆರಳಿ ಮನವಿ ಸ್ವೀಕರಿಸಿದ ಸಿಎಂ ಕುಮಾರಸ್ವಾಮಿ

ಜಿಲ್ಲೆಯ ಚಂಡ್ರಕಿ ಗ್ರಾಮದಲ್ಲಿ ಶುಕ್ರವಾರ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು...
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ
ಯಾದಗಿರಿ: ಜಿಲ್ಲೆಯ ಚಂಡ್ರಕಿ ಗ್ರಾಮದಲ್ಲಿ ಶುಕ್ರವಾರ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶಾಂತಚಿತ್ತರಾಗಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. 
ಸ್ವಯಂ ಉದ್ಯೋಗ, ಭೂಮಿ ಮಂಜೂರಾತಿ, ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ, ವಸತಿ ಸೌಕರ್ಯ ಮೊದಲಾದ ಬೇಡಿಕೆಗಳೊಂದಿಗೆ ಬಂದ ಜನರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿದರು.
ಈ ಮಧ್ಯೆ ವೇದಿಕೆಯ ಮುಂಭಾಗದಲ್ಲಿ ವಿಕಲಚೇತನರು ಜಮಾವಣೆಯಾಗಿದ್ದನ್ನು ಗಮನಿಸಿದ ಮುಖ್ಯಮಂತ್ರಿಗಳು, ವಿಕಲಚೇತನರು ತೊಂದರೆಪಟ್ಟುಕೊಂಡು ಮುಖ್ಯವೇದಿಕೆಗೆ ಬರುವುದು ಬೇಡ ಎಂದು ಸ್ವತಃ ತಾವೇ ಅಲ್ಲಿಗೆ ಬರುವುದಾಗಿ ತಿಳಿಸಿದರು. ವೇದಿಕೆಯ ಮುಂಭಾಗದಲ್ಲಿದ್ದ ವಿಕಲಚೇತನರ ಬಳಿ ತೆರಳಿ ಅವರ ಮನವಿಗಳನ್ನು ಪಡೆದು, ಅಹವಾಲುಗಳನ್ನು ಸ್ವೀಕರಿಸಿದರು.
ಜನತಾದರ್ಶನದಲ್ಲಿ ನಿರತರಾದ ಮುಖ್ಯಮಂತ್ರಿಗಳು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದನ್ನು ಕಂಡು, ತಾವು ಎಲ್ಲಿಯೂ ಹೋಗುವುದಿಲ್ಲ ರಾತ್ರಿ 8 ಗಂಟೆಯಾದರೂ ಸರಿ ನಿಮ್ಮ ಮನವಿಗಳನ್ನು ಸ್ವೀಕರಿಸುತ್ತೇನೆ, ಆತುರ ಪಡಬೇಡಿ ಎಂದು ಮನವಿ ಮಾಡಿದರು. ವೇದಿಕೆಯಿಂದ ಕದಲದೇ ಮಧ್ಯಾಹ್ನದ ಭೋಜನವನ್ನೂ ಸ್ವೀಕರಿಸದೇ ಜನತಾ ದರ್ಶನ ನಡೆಸಿದರು.
ಜನತಾದರ್ಶನ ಕಾರ್ಯಕ್ರಮಕ್ಕೆ ವರುಣನ ಸಿಂಚನ
ಇಂದು ಸಂಜೆ 4.15 ರಿಂದ ಪ್ರಾರಂಭವಾದ ಮಳೆಯ ನಡುವೆಯೂ ಮುಖ್ಯಮಂತ್ರಿಗಳ ಜನತಾದರ್ಶನ ನಿರಾತಂಕವಾಗಿ ನಡೆಯಿತು. ಮಳೆ ಬಂದರೂ ಸಹ ಕಾರ್ಯಕ್ರಮಕ್ಕೆ ಅಡಚಣೆಯಾಗಬಾರದೆಂಬ ಮುನ್ನೆಚ್ಚರಿಕೆಯೊಂದಿಗೆ ಜಿಲ್ಲಾಡಳಿತವು ತಗಡುಗಳಿಂದ ಬೃಹತ್ ಸಭಾಂಗಣ ನಿರ್ಮಿಸಿದ್ದರಿಂದ ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗಲಿಲ್ಲ.
ಮುಖ್ಯಮಂತ್ರಿ ಅವರ ಜನತಾದರ್ಶನ ಹಾಗೂ ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ  ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ವಿವಿಧ ಇಲಾಖೆಗಳ ಯೋಜನೆಯನ್ನು ಬಿಂಬಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಸರ್ಕಾರದ ಕಳೆದ ಒಂದು ವರ್ಷದ ಮಾಹಿತಿಯನ್ನು ನಿಖರ ಅಂಕಿ ಅಂಶಗಳೊಂದಿಗೆ ಆಕರ್ಷಕ ಫಲಕಗಳನ್ನು ನಿರ್ಮಿಸಿ ಕಲಾತ್ಮಕವಾಗಿ ಅನಾವರಣಗೊಳಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದರ್ಶನ ಮಳಿಗೆ ಕಾರ್ಯಕ್ರಮದ ಆಕರ್ಷಕ ಕೇಂದ್ರವಾಗಿತ್ತು.
ವಾರ್ತಾ ಇಲಾಖೆಯ ಪ್ರದರ್ಶನ ಮಳಿಗೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉದ್ಘಾಟಿಸಿದರು. ರೈತರ ಸಾಲ ಮನ್ನಾ, ಬಡವರ ಬಂಧು, ಕಾಯಕ, ಎಲ್ಲರಿಗೂ ಶಿಕ್ಷಣ, ತಳಸಮುದಾಯಗಳ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮೂಲಕ ಕೈಗೊಂಡಿರುವ ಚಟುವಟಿಕೆಗಳನ್ನು ಸಚಿತ್ರವಾಗಿ, ನಿಖರ ಮಾಹಿತಿಯೊಂದಿಗೆ ಅಳವಡಿಸಿ ಜನರಿಗೆ ಪರಿಚಯಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com