ಮುಂಗಾರು ವಿಳಂಬ, ಜಲಾಶಯಗಳು ಖಾಲಿ ಖಾಲಿ; ಇದು ಕರ್ನಾಟಕದ ಸದ್ಯದ ಸ್ಥಿತಿ

ಮುಂಗಾರು ಆಗಮನ ವಿಳಂಬದಿಂದ ಈ ವರ್ಷ ಕರ್ನಾಟಕ ಜನತೆಗೆ ತೊಂದರೆಯಾಗುವ ಸಾಧ್ಯತೆಯಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂಗಾರು ಆಗಮನ ವಿಳಂಬದಿಂದ ಈ ವರ್ಷ ಕರ್ನಾಟಕ ಜನತೆಗೆ ನೀರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು ಆಗಸ್ಟ್, ಸೆಪ್ಟೆಂಬರ್ ವೇಳೆಗಷ್ಟೆ ಭರ್ತಿಯಾಗುವ ಸಾಧ್ಯತೆಯಿದೆ. ಮಂಡ್ಯದ ಕೆಆರ್ ಎಸ್ ಜಲಾಶಯ ಸೇರಿದಂತೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರು ನಿಗದಿತ ಗರಿಷ್ಠ ಮಟ್ಟಕ್ಕೆ ಇನ್ನೂ ತಲುಪಿಲ್ಲ.
ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಮುಂಗಾರು ಆಗಮಿಸುತ್ತದೆ. ನಂತರ ಕೆಲ ದಿನಗಳಲ್ಲಿ ಕರ್ನಾಟಕ್ಕೆ ಕಾಲಿಡುತ್ತದೆ. ಈ ವರ್ಷ ಅದು ಏಳು ದಿನ ತಡವಾಗಿ ಆಗಮಿಸಿದ್ದು ಇನ್ನೂ ರಾಜ್ಯಾದ್ಯಂತ ಮುಂಗಾರು ಮಳೆ ಪಸರಿಸಿಲ್ಲ. ಈ ವರ್ಷ ವಿಶೇಷವಾಗಿ ವಿಳಂಬವಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ. 
ಸಾಮಾನ್ಯವಾಗಿ ಆಗಸ್ಟ್ ಮೊದಲ ವಾರದಲ್ಲಿ ಕೆಆರ್ ಎಸ್ ಜಲಾಶಯದಲ್ಲಿ ಇನ್ನೂ ನೀರಿನ ಮಟ್ಟ ಕನಿಷ್ಠ ಮಟ್ಟದಲ್ಲಿದೆ. ಮುಂದಿನ ದಿನಗಳಲ್ಲಿ ಮಳೆ ಚೆನ್ನಾಗಿ ಸುರಿದರೆ ಮಾತ್ರ ಆಗಸ್ಟ್ ತಿಂಗಳ ಕೊನೆಗೆ ಕೆಆರ್ ಎಸ್ ಜಲಾಶಯ ತುಂಬಬಹುದು ಎನ್ನುತ್ತಾರೆ ನೀರಾವರಿ ಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾಪ್ಟನ್ ಎಸ್ ರಾಜಾ ರಾವ್.
ಇಲ್ಲಿ ಸರಿಯಾಗಿ ಮಳೆ ಸುರಿಯದಿದ್ದರೆ ಕೆಆರ್ ಎಸ್ ನಿಂದ ತಮಿಳು ನಾಡಿಗೆ ನೀರು ಕಳುಹಿಸುವುದು ಹೇಗೆ? ಕಬಿನಿ ಜಲಾಶಯ ಕೂಡ ಸರಿಯಾಗಿ ತುಂಬಿಲ್ಲ ಎನ್ನುತ್ತಾರೆ ಅವರು. ಜೂನ್ ತಿಂಗಳಲ್ಲಿ ಕರ್ನಾಟಕ ನೆರೆ ರಾಜ್ಯಕ್ಕೆ 9.19 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಆದರೆ ಕುಡಿಯುವ ನೀರಿಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಇನ್ನು ಉಳಿದ ಬೇಸಾಯಕ್ಕೆ ನೀರು ಬಿಡುವುದೆಲ್ಲಿಗೆ  ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯ ನೀರಿಗಾಗಿ ನೆರೆಯ ಮಹಾರಾಷ್ಟ್ರವನ್ನು ನಂಬಿಕೊಂಡಿದೆ. ಅಲ್ಲಿ ಚೆನ್ನಾಗಿ ಮಳೆಯಾದರೆ ಸೆಪ್ಟೆಂಬರ್ ವೇಳೆಗೆ ಭರ್ತಿಯಾಗಬಹುದು. ಈ ವರ್ಷ ತುಂಗಭದ್ರಾ ಜಲಾಶಯ ತುಂಬುತ್ತದೆಯೇ, ಇಲ್ಲವೇ ಎಂದು ನಮಗೆ ಆತಂಕವಿದೆ ಎನ್ನುತ್ತಾರೆ ಅಧಿಕಾರಿಗಳು. 
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com