ಮೈಸೂರು: ಈಗಾಗಲೇ ಬರದಿಂದ ಕಂಗೆಟ್ಟಿರುವ ರೈತರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ, ಕೃಷಿ ಚಟುವಟಿಕೆ ಆರಂಭಿಸಲು ಮುಂದಾಗಿದ್ದಾರೆ,ಆದರೆ ಕೃಷಿ ಸಹಕಾರ ಸಂಘಗಳು ಸಾಲ ನೀಡಲು ಹೊಸ ಷರತ್ತು ವಿಧಿಸಿವೆ.
ಸಾಲ ಪಡೆಯಲು ಭೂಮಿಯನ್ನು ಅಡಮಾನ ಇಡುವಂತೆ ಹೊಸ ನಿಯಮ ಜಾರಿಗೆ ತಂದಿದೆ, ಈ ನಿಯಮ ರೈತರನ್ನು ಹೊಸ ಸಂಕಷ್ಟಕ್ಕೆ ದೂಡಿದೆ, ಅದರಲ್ಲೂ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಹೆಚ್ಚಿನ ಸಮಸ್ಯೆ ತಂದೊಡ್ಡಿದೆ.
ಸಾಲ ಪಡೆಯಲು ದಾಖಲಾತಿಗಳನ್ನು ನೀಡಬೇಕಾಗುತ್ತದೆ, ಜಮೀನಿಗೆ ಸಂಬಂಧಿಸಿದ ಮ್ಯೂಟೇಶನ್ ಕಾಪಿ, ಹಕ್ಕು, ಹಿಡುವಳಿ, ಇಸಿ, ಆಧಾರ್ , ಪಾಸ್ ಬುಕ್, ಮುಂತಾದ ದಾಖಲೆಗಳನ್ನು ನೀಡಲು ರೈತರಿಗೆ ಸಾಕು ಸಾಕಾಗಿ ಹೋಗಿದೆ. ಇದರ ಜೊತೆಗೆ ಭೂ ಮಾಲೀಕರು 600 ರು. ನೀಡಿ ಸಹಕಾರ ಸಂಘದ ಸದಸ್ಯತ್ವ ಮಾಡಿಸಿಕೊಳ್ಳಬೇಕು,
ಅಲ್ಪಾವಧಿ ಸಾಲ ನೀಡಲು ಸಹಕಾರ ಸಂಘಗಳು ವಿಧಿಸಿರುವ ಈ ಷರತ್ತುಗಳು ರೈತರನ್ನು ಹೈರಾಣು ಮಾಡಿವೆ. ಸುಮಾರು ಎರಡೂವರೆ ಸಾವಿರ ರು ಹಣ ಖರ್ಚಾಗುತ್ತದೆ ಎಂದು ರೈತರೊಬ್ಬರು ಅಲವತ್ತು ಕೊಂಡಿದ್ದಾರೆ.
ಸಾಲ ಪ್ರಕ್ರಿಯೆಗಾಗಿ ಸುಮಾರು 2ರಿಂದ ಮೂರು ಸಾವಿರ ರು ಹಣ ಖರ್ಚು ಮಾಡಬೇಕಾಗಿದೆ, ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ರೈತರಿಗೆ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋರಿಸಿದ್ದಾರೆ,
ಈಗಾಗಲೇ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ರೈತರು ಮತ್ತೊಮ್ಮೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.