ಬೆಂಗಳೂರು: ಅಮೆರಿಕಾದಲ್ಲಿ ಒಕ್ಕಲಿಗರ ಪರಿಷತ್ ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕಾ ಪ್ರಯಾಣ ಬೆಳೆಸಿದ್ದಾರೆ.
ನಿನ್ನೆ ರಾತ್ರಿ ಏಳು ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈನತ್ತ ಕುಮಾರಸ್ವಾಮಿ ಅವರು ಪ್ರಯಾಣ ಬೆಳೆಸಿದರು. ಆದಿ ಚುಂಚನಗಿರಿ ಮಠದ ಶಿವನ ದೇವಸ್ಥಾನ ಶಿಲಾನ್ಯಾಸ ಹಾಗೂ ಜುಲೈ 4,5,6ರಂದು ನಡೆಯುವ ಒಕ್ಕಲಿಗ ಪರಿಷತ್ತಿನ ಸಮ್ಮೇಳನದಲ್ಲಿ ಅವರು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೆಲವು ಅಧಿಕಾರಿಗಳು ಕೂಡ ಜೊತೆಯಾಗಿದ್ದಾರೆ. ದೇವೇಗೌಡರು ಎರಡು ದಿನಗಳ ಮಟ್ಟಿಗೆ ಅಮೆರಿಕಾದಲ್ಲಿದ್ದು ಬಳಿಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ನಾಳೆ ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಆದಿಚುಂಚನಗಿರಿಯ ಮಠದ ಶಾಖಾ ಮಠದಲ್ಲಿ ನಿರ್ಮಿಸಿರುವ ಕಾಲಭೈರವೇಶ್ವರ ದೇವಸ್ಥಾನದ ದೇಗುಲ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದಾದ ಬಳಿಕ ಜುಲೈ 4ರಂದು ಅಮೆರಿಕ ಒಕ್ಕಲಿಗರ ಪರಿಷತ್ತಿನ ಸಮಾವೇಶ ಕೂಡ ನಡೆಯಲಿದ್ದು, ಅದರಲ್ಲೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಗಳನ್ನು ಮುಗಿಸಿ, ಜುಲೈ 7ಕ್ಕೆ ಅಮೇರಿಕಾದಿಂದ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ಸಚಿವಾಲಯ ಮೂಲಗಳಿಂದ ತಿಳಿದು ಬಂದಿದೆ.
ಸಿಎಂ ಅವರ ಈ ಪ್ರವಾಸ ಸಂಪೂರ್ಣ ಖಾಸಗಿಯಾಗಿದ್ದು, ಸರ್ಕಾರ ಯಾವುದೇ ವೆಚ್ಚ ಭರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.