ಬೆಂಗಳೂರು: ಮೈಸೂರು-ಕುಶಾಲನಗರ ರೈಲು ಮಾರ್ಗವನ್ನು ನಿರ್ಮಿಸುವ ಯಾವುದೇ ಯೋಜನೆಯಿಲ್ಲ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್ ಗೆ ಹೇಳಿದ್ದರೂ ಕೂಡ ರೈಲ್ವೆ ಮಂಡಳಿ 87 ಕಿಲೋ ಮೀಟರ್ ಉದ್ದದ ರೈಲ್ವೆ ಯೋಜನೆಗೆ ಅನುಮೋದನೆ ನೀಡಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಜುಲೈಯಲ್ಲಿ ಕೊಡಗು ವನ್ಯಜೀವಿ ಸೊಸೈಟಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಈ ರೈಲು ಮಾರ್ಗ ತಲಶ್ಶೆರಿ-ಮೈಸೂರು ರೈಲು ಯೋಜನೆಗೆ ಅಂತರಜೋಡಣೆಯಾಗಿದ್ದು ಕೊಡಗು ಜಿಲ್ಲೆಯ ಪರಿಸರ ಸೌಂದರ್ಯ ಮತ್ತು ವನ್ಯಜೀವಿ ಸಂಕುಲಕ್ಕೆ ತೀವ್ರ ಹಾನಿಯನ್ನುಂಟುಮಾಡಲಿದೆ ಎಂದು ವಾದಿಸಿತ್ತು.
ರೈಲ್ವೆ ಮಂಡಳಿ ಪ್ರಕಾರ, ಮೈಸೂರು-ಬೆಳಗೊಳ-ಕುಶಾಲನಗರ ಹೊಸ ರೈಲು ಮಾರ್ಗಕ್ಕೆ 1,854.62 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಮತಿ ನೀಡಿದೆ. ರೈಲ್ವೆ ಸಚಿವಾಲಯದ ಹಣಕಾಸು ನಿರ್ದೇಶನಾಲಯ ಹೊಸ ಯೋಜನೆಗೆ ಅನುಮೋದನೆ ನೀಡಿದೆ.