ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪುರುಷೋತ್ತಮ ಮಕ್ಕಳ ಮನೆಯನ್ನು ಹುಟ್ಟುಹಾಕಿದರು. ಅವರು ಕೂಡ ಅದೇ ಸರ್ಕಾರಿ ಶಾಲೆಯಲ್ಲಿ ಓದಿದ್ದು. ''ನಾವು ಓದುತ್ತಿದ್ದಾಗ ತುಂಬಾ ಜನ ಮಕ್ಕಳು ಬರುತ್ತಿದ್ದರು. ಆದರೆ ನಂತರ ಸುತ್ತಮುತ್ತ ಇಂಗ್ಲಿಷ್ ಮಾಧ್ಯಮ ಶಾಲೆಗಳು ಆರಂಭವಾದ ನಂತರ ನಾವು ಓದಿದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗತೊಡಗಿತು. 600 ಮಕ್ಕಳಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕೆ ಇಳಿಯಿತು. ಇದಕ್ಕೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆವು. ಕೆ ಆರ್ ನಗರದಲ್ಲಿ ರಾಜ್ಯ ಅಭಿವೃದ್ಧಿ ನಿರ್ವಹಣ ಸಮಿತಿ ನಡೆಸುವ ಪೂರ್ವ ಪ್ರಾಥಮಿಕ ಶಾಲೆಯ ಬಗ್ಗೆ ಕೇಳಲ್ಪಟ್ಟೆವು. ಅದರಂತೆ ಹೊಸ ತರಗತಿ ಕೊಠಡಿ ಇಲ್ಲಿ ನಿರ್ಮಿಸಿ ಖಾಸಗಿ ಶಾಲೆಯ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಹಂತವನ್ನು ಆರಂಭಿಸಿದೆವು. ನಾವೇ ಮಕ್ಕಳಿಗೆ ಸಮವಸ್ತ್ರ, ಶೂ ನೀಡಿದೆವು. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಶಿಕ್ಷಕಿಯರನ್ನು ಕರೆದುಕೊಂಡು ಬಂದು ಈ ಶಾಲೆಗೆ ನೇಮಿಸಿಕೊಂಡೆವು'' ಎನ್ನುತ್ತಾರೆ ಪುರುಷೋತ್ತಮ.