ಬೆಂಗಳೂರು: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಸೋಮವಾರ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಫೆ.25ರಂದು ಉಮಾಶಂಕರ್ ಎಂಬುವವರು ಮೃತಪಟ್ಟಿದ್ದರು. ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತರ ಅಣ್ಣನ ಮಗ ಅಶ್ವಥಪ್ಪ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶವ ಪರೀಕ್ಷೆಯಿಂದ ವ್ಯಕ್ತಿ ಸಂಶಯಾಸ್ಪದವಾಗಿ ಮೃತಪಟ್ಟಿರುವುದು ದೃಢಪಟ್ಟಿತ್ತು.
ಪೊಲೀಸರು ಪತ್ನಿ ಸುಖಿತಾ(30) ಅವರನ್ನು ವಿಚಾರಣೆಗೊಳಪಡಿಸಿದಾಗ ತಾನು ಶ್ರೀನಿವಾಸ್ ಎಂಬುವವರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಪತಿಗೆ ಗೊತ್ತಾಗಿದ್ದರಿಂದ, ಪ್ರಿಯಕರನ್ನು ರಾತ್ರಿ ಮನೆಗೆ ಕರೆಸಿ ತನ್ನ ಪತಿಯನ್ನು ಉಸಿರುಗಟ್ಟಿ ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಆರೋಪಿಗಳಾದ ಪತ್ನಿ ಸುಖಿತಾ(30) ಹಾಗೂ ಪ್ರಿಯಕರ ಶ್ರೀನಿವಾಸ್ (31) ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.