ಬೆಂಗಳೂರು: ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಕಾರೊಂದರ ಗಾಜು ಒಡೆದು 4 ಲಕ್ಷ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ.
ಎಂ. ಹರಿಲಾಲ್ ನಾಯಕ್ ಹಣ ಕಳೆದುಕೊಂಡವರು.ಬಿಲ್ಡರೊಬ್ಬರ ಡ್ರೈವರ್ ಆಗಿರುವ ಇವರು ಆಂಧ್ರ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡಿದ್ದು, ವಿನಾಯಕನಗರದ ತೆಂಗಿನ ಕಾಯಿ ವ್ಯಾಪಾರಿ ಅಂಗಡಿ ಬಳಿ ಕಾರು ಪಾರ್ಕಿಂಗ್ ಮಾಡಿದ್ದರು.
ಯಲಹಂಕದ ಬಿಲ್ಡರ್ ಡಿ ರಾಜಕೇಖರ ರೆಡ್ಡಿ ಎಂಬವರ ಜೊತೆಗೆ ನಾಯಕ್ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಕೊಡಲು ಹಣ ಡ್ರಾ ಮಾಡಿಕೊಂಡು ಬರುವಂತೆ ರೆಡ್ಡಿ ನಾಯಕ್ ಅವರನ್ನು ಕಳುಹಿಸಿದ್ದರು.
ಬೈಕಿನಲ್ಲಿದ್ದವರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ